ತುಮಕೂರು: ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹಿಂದುಳಿದ ಸಮುದಾ
ಯದವರು ಉನ್ನತ ಹುದ್ದೆಗೇರಿದ ಸಮಯದಲ್ಲಿ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಯುವಜನರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಎಚ್ಚರಿಸಿದರು.
ನಗರದ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ವತಿಯಿಂದ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕೆಲವರು ತಪ್ಪು ತಿಳಿವಳಿಕೆಯಿಂದ ನನ್ನ ವಿರುದ್ಧ ನೀಡಿದ ದೂರಿನಿಂದಾಗಿ ಕೆಲಸದಿಂದ ಅಮಾನತಾಗಬೇಕಾಯಿತು. ಈಗ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದೇನೆ. ಈ ರೀತಿಯ ಅನುಭವಗಳು ಇತರರಿಗೆ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ’ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹನುಮದಾಸ್, ‘ಸಾಮಾಜಿಕ, ಶೈಕ್ಷಣಿಕ
ವಾಗಿ ಹಿಂದುಳಿದಿರುವ ಸಮುದಾಯಗಳ ಅಸ್ತಿತ್ವ ಉಳಿಯಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಯುವ ಸಮುದಾಯ ಶಿಕ್ಷಣ ಪಡೆಯುವತ್ತ ಮುಂದಾಗಬೇಕು. ಉತ್ತಮ ಅಂಕ ಪಡೆದ ಮಕ್ಕಳನ್ನು ಪ್ರೋತ್ಸಾಹಿಸಿ, ಗುರುಗಳನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಸಕಾಲಿಕವಾಗಿದೆ’ ಎಂದು ಶ್ಲಾಘಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಸಿ.ನಂಜಯ್ಯ, ‘ಗುರುವಿಲ್ಲದೆ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯವಿಲ್ಲ. ಶೈಕ್ಷಣಿಕ ಸಮಾವೇಶದ ಜತೆಗೆ, ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಸಮುದಾಯದ ಯುವಕರು ಹಾಗೂ ಶಿಕ್ಷಕರ ನಡುವೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ. ಶಿಕ್ಷಣದಲ್ಲಿ ಸಾಕಷ್ಟು ಹಿಂದೆ ಉಳಿದಿರುವ ತಿಗಳ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಇದು ಪೂರಕವಾಗಿದೆ’ ಎಂದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರೆಸ್ ರಾಜಣ್ಣ, ‘ಯುವಜನರನ್ನು ಸಮುದಾಯದ ಸಂಘಟನೆಯಲ್ಲಿ ತೊಡಗಿಸಿ
ಕೊಳ್ಳುವ ನಿಟ್ಟಿನಲ್ಲಿ ಯೂತ್ ಫೋರ್ಸ್ ಸಂಘಟನೆ ಹುಟ್ಟು ಹಾಕಲಾಗಿದೆ’ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ‘ಪ್ರಾಂಶುಪಾಲ ಶ್ರೀಕಂಠಯ್ಯ, ಶಿಕ್ಷಣ ತಜ್ಞ ಡಾ.ಲೋಕೇಶ್, ಪಾಲಿಕೆ ಸದಸ್ಯರಾದ ಶಶಿಕಲಾ ಗಂಗಹನುಮಯ್ಯ, ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಜಿ.ಪಂ ಮಾಜಿ ಸದಸ್ಯರಾದ ಎಂ.ಬಿ.ಕೃಷ್ಣಯ್ಯ, ಸಂಗೀತ ಶ್ರೀನಿವಾಸ, ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರೀಯ ತಿಗಳ ಯೂತ್ ಫೋರ್ಸ್ ಅಧ್ಯಕ್ಷ ಮಾರುತಿ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಚ್.ಆರ್.ರೇಣುಕಯ್ಯ, ಎ.ರಾಮುಸ್ವಾಮಿ, ಅನಂತರಾಜು, ಹುಲಿರಾಮಯ್ಯ, ಜಯರಾಮ್ ಸೇರಿದಂತೆ ಜಿಲ್ಲೆಯ 16 ಶಿಕ್ಷಕರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.