ತುಮಕೂರು: ಕವಿ, ಸಾಹಿತಿ, ಪತ್ರಕರ್ತರಾಗಿ ಡಿ.ವಿ.ಗುಂಡಪ್ಪ ಅವರ ಕೊಡುಗೆಗಳು ಅಪಾರವಾದುದು. ಅವರ ’ಮಂಕುತಿಮ್ಮನ ಕಗ್ಗ’ ಕೃತಿಯು ನಮ್ಮ ಬದುಕಿನ ಸ್ಫೂರ್ತಿಯಾಗಿದೆ ಎಂದು ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ಅಭಿಪ್ರಾಯಪಟ್ಟರು.
ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಮಹಿಳಾ ಸಮಾಜ ಟ್ರಸ್ಟ್ ಸಭಾಂಗಣದಲ್ಲಿ ಮಹಿಳಾ ಸಮಾಜದಿಂದ ‘ಮಂಕುತಿಮ್ಮನ ಕಗ್ಗ’ ಕೃತಿಯು ಪ್ರಕಟಗೊಂಡು 75 ವರ್ಷಗಳಾದ ಹಿನ್ನೆಲೆಯಲ್ಲಿ ಆ ನೆನಪಿಗಾಗಿ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಮಂಕುತ್ತಿಮ್ಮನ ಕಗ್ಗ’ವು ಆಧುನಿಕ ಭಗವದ್ಗೀತೆ ಎಂದೇ ಹೆಸರುವಾಸಿಯಾಗಿದ್ದು, ಅದರಲ್ಲಿರುವ ಪ್ರತಿಯೊಂದು ಮುಕ್ತಕಗಳೂ ಬದುಕಿಗೆ ದಾರಿದೀಪದಂತಿವೆ. ಹಾಗಾಗಿ ‘ಕಗ್ಗ’ವನ್ನು ಮತ್ತಷ್ಟು ಪ್ರಚಾರ ಮಾಡಬೇಕಾಗಿದೆ ಎಂದು ಹೇಳಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಎಸ್.ತುಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಸುಭಾಷಿಣಿ ಆರ್.ಕುಮಾರ್, ಭಾರತಿ ಶ್ರೀನಿವಾಸ್, ಶುಭಾ ರಮೇಶ್, ಕೆ.ಎಸ್.ಮಂಜುಳಾ, ಉಷಾ ಅನಂತರಾಮಯ್ಯ ಹಾಗೂ ಶಾಲಿನಿ ರವಿಶಂಕರ್ ಇದ್ದರು.