ತುಮಕೂರು: ಪ್ರತಿ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಹೆಬ್ಬೂರಿನ ಕೊಲ್ಲಾಪುರದಮ್ಮ ಜಾತ್ರಾ ಮಹೋತ್ಸವ ಜೂ.3ರಿಂದ ಆರಂಭವಾಗಲಿದೆ. ಆದರೆ ಗ್ರಾಮಕ್ಕೆ ಭಕ್ತರನ್ನು ಊರಿನ ಚರಂಡಿಗಳ ದುರ್ವಾಸನೆ ಬರಮಾಡಿಕೊಳ್ಳುತ್ತಿದೆ.
ಜಾತ್ರಾ ಮಹೋತ್ಸವಕ್ಕೆ ಯಾವುದೇ ಮೂಲ ಸೌಕರ್ಯಗಳನ್ನು ಸ್ಥಳೀಯ ಆಡಳಿತ ಕಲ್ಪಿಸಿಲ್ಲ. ದೇವಸ್ಥಾನದ ರಸ್ತೆಯ ಚರಂಡಿ ಹದಗೆಟ್ಟಿದ್ದು ಗಬ್ಬೆದ್ದು ನಾರುತ್ತಿದೆ.
ಈ ತೆರೆದ ಚರಂಡಿಗಳ ದುರ್ವಾಸನೆಯಿಂದ ವಾತಾವರಣವೇ ಯಾತನಾಮಯವಾಗಿದೆ ಎಂದು ಸ್ಥಳೀಯರು ದೂರುವರು. ಸಮಸ್ಯೆ ಪರಿಹರಿಸುವಂತೆ ಅನೇಕ ಬಾರಿ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದೇ ರಸ್ತೆಯಲ್ಲಿ ನಾಡಕಚೇರಿ ಸಹ ಇದೆ. ಅಧಿಕಾರಿಗಳು ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಬಗ್ಗೆ ಜಾಣ ಕುರುಡಾಗಿ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾತ್ರೆಗೆ ಶುಭಕೋರಿ ರಾಜಕಾರಣಿಗಳು ಫ್ಲೆಕ್ಸ್ ಹಾಕಿಸಿದ್ದಾರೆ. ಇಷ್ಟೆಲ್ಲ ವೆಚ್ಚ ಮಾಡಿ ಫ್ಲೆಕ್ಸ್ ಹಾಕಿಸುವ ಬದಲು ಚರಂಡಿ ಸರಿಪಡಿಸುವುದರ ಬಗ್ಗೆ ಗಮನ ನೀಡಬೇಕಿತ್ತು. ಗ್ರಾಮವೂ ಸ್ವಚ್ಛವಾಗುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.