ತುಮಕೂರು: ಜಿಲ್ಲೆಯಲ್ಲಿನ ಕೆರೆಗಳನ್ನು ತುಂಬಿಸಿ, ಅಂತರ್ಜಲ ಮಟ್ಟ ಹೆಚ್ಚಳ ಮಾಡಲು ಆದ್ಯತೆ ನೀಡುತ್ತೇನೆ ಎಂದು ಸಂಪುಟ ದರ್ಜೆಯ ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಹೇಳಿದರು.
ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಹೇಮಾವತಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆಯ ನಾಲೆಗಳು ಹಾದುಹೋಗುತ್ತವೆ. ಅವುಗಳ ನೀರನ್ನು ಸಮರ್ಪಕವಾಗಿ ವಿನಿಯೋಗಿಸಿಕೊಂಡು ಕೆರೆಗಳಿಗೆ ನೀರು ತುಂಬಿಸಲು ಒತ್ತು ನೀಡುತ್ತೇನೆ ಎಂದರು.
ಹಳ್ಳಿಗಳ ಜನರ ನಡುವೆ ಇದ್ದು, ಅವರ ಬದುಕಿಗೆ ಹತ್ತಿರದ ಕೆಲಸ ಮಾಡುವುದು ನನಗೆ ಇಷ್ಟ. ಈ ಕೆಲಸವಿರುವ ಖಾತೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಿದ್ದೇನೆ. ಅದರ ಹೊರತಾದ ಖಾತೆ ಕೊಟ್ಟರೂ ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದರು.
ಮಂತ್ರಿಸ್ಥಾನ ಸಿಗುವ ಆಸೆ ಹೊಂದಿದವರಿಗೆ ಹುದ್ದೆ ಸಿಗದಿದ್ದಾಗ ಬೇಸರ ಆಗುವುದು ಸ್ವಾಭಾವಿಕ. ಮಂತ್ರಿ ಸ್ಥಾನಗಳ ಹಂಚಿಕೆಯ ಮತ್ತೊಂದು ಸುತ್ತು ಬಾಕಿ ಇರುವುದರಿಂದ ಅಸಮಾಧಾನ ಆದಷ್ಟು ಬೇಗ ನಿವಾರಣೆ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.