ಮಧುಗಿರಿ: ಅಪೌಷ್ಟಿಕತೆ ನಿವಾರಣೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕು ಎಂದು ಉಪವಿಭಾಗಾಧಿಕಾರಿ ಕೆ. ನಂದಿನಿದೇವಿ ಹೇಳಿದರು.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಪೋಷಣಾ ಅಭಿಯಾನದಲ್ಲಿ ಪೋಷಣಾ ಮೇಳ ಉದ್ಘಾಟಿಸಿ ಮಾತನಾಡಿದರು.
ತಾಯಿ ಮತ್ತು ಮಗು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ಮಾತನಾಡಿ, ‘ಗರ್ಭಿಣಿಯರು ತರಕಾರಿ, ಸೊಪ್ಪು, ಹಣ್ಣು ಸೇವಿಸುವುದರಿಂದ ಮಗುವಿನ ಆರೋಗ್ಯ ಕಾಪಾಡಬೇಕು’ ಎಂದರು.
ಸಿಡಿಪಿಒ ಎಸ್.ಅನಿತಾ ಮಾತನಾಡಿ, ಸರ್ಕಾರ ಅಪೌಷ್ಟಿಕತೆ ತೊಡೆದು ಹಾಕಲು ಗರ್ಭಿಣಿಯರಿಗೆ ಉತ್ತಮ ಆಹಾರ ಒದಗಿಸುತ್ತಿದೆ. ನರೇಗಾ ಯೋಜನೆಯಡಿ ಶಾಲೆ, ಕಾಲೇಜು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜಾಗವಿರುವ ಕಡೆ ಕೈತೋಟ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಡಿ. ದೊಡ್ಡಸಿದ್ದಯ್ಯ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ, ಆರೋಗ್ಯಾಧಿಕಾರಿ ರಮೇಶಬಾಬು, ಆರೋಗ್ಯ ನಿರೀಕ್ಷಕ ಧರಣೇಶ್ ಗೌಡ, ಉಪನ್ಯಾಸಕ ಗೋವಿಂದರಾಜು, ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಎಸ್. ನೇತ್ರಾವತಿ ಇದ್ದರು.