ತುಮಕೂರು: ಹಿರಿಯ ರಾಜಕಾರಣಿ ಟಿ.ಬಿ.ಜಯಚಂದ್ರ ಕಾಂಗ್ರೆಸ್ನಿಂದ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
* ಯಾವ ವಿಚಾರದ ಮೇಲೆ ಪ್ರಚಾರ ನಡೆಸಿದ್ದೀರಿ?
ಹಿಂದೆ ಸಚಿವನಾಗಿದ್ದಾಗ ಕ್ಷೇತ್ರದಲ್ಲಿ ₹2,500 ಕೋಟಿಯಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ನಿರ್ಮಾಣವಾದಷ್ಟು ಚೆಕ್ ಡ್ಯಾಂಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಕೈಗಾರಿಕೆ ಅಭಿವೃದ್ಧಿಗಾಗಿ 4 ಸಾವಿರ ಎಕರೆ ಪ್ರದೇಶ ಗುರುತಿಸಿದ್ದು, ಅದರಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳು ಆರಂಭವಾಗುತ್ತಿವೆ. ಇದರಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗಲಿವೆ. ನಾಲ್ಕು ದಶಕಗಳ ರಾಜಕೀಯ ಅನುಭವದಲ್ಲಿ ಕ್ಷೇತ್ರದ ಪ್ರತಿ ಗ್ರಾಮ, ಮನೆ, ಜನಾಂಗದ ಸಮಸ್ಯೆಗಳು ಗೊತ್ತಿವೆ. ಅದಕ್ಕೆ ಪರಿಹಾರಗಳೂ ನನ್ನಿಂದ ಸಾಧ್ಯವಿದೆ. ಉಳಿದ ಅಭ್ಯರ್ಥಿಗಳಿಗೆ ರಾಜಕೀಯ ಅನುಭವ ಇಲ್ಲ. ಅವರು ಕ್ಷೇತ್ರದ ಸಮಸ್ಯೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ರಾಜಕೀಯ ಹಿನ್ನೆಲೆಯನ್ನು ಕ್ಷೇತ್ರದ ಜನರು ಅರ್ಥಮಾಡಿಕೊಳ್ಳುತ್ತಾರೆ. ಅಭಿವೃದ್ಧಿ ಮೇಲೆ ಮತ ಕೇಳುತ್ತಿದ್ದೇನೆ.
* ಯುವಕರ ಕಡೆಗೆ ಜನರ ದೃಷ್ಟಿ ನೆಟ್ಟಿದೆ?
ನನಗೆ ವಯಸ್ಸಾಗಿರಬಹುದು. ಆದರೆ ಇತರರಿಗಿಂತ ‘ಯುವಕ’ನಂತೆ ಓಡಾಡುತ್ತಿದ್ದೇನೆ. ಅಷ್ಟೇ ಉತ್ಸಾಹ ಇದೆ, ಆರೋಗ್ಯವಾಗಿದ್ದೇನೆ. ಕ್ಷೇತ್ರದ ಕೆಲಸ ಮಾಡುವ ಶಕ್ತಿ ಇದೆ.
* ನೀರಾವರಿ ಹೋರಾಟವೆಲ್ಲ ನಿಮ್ಮ ಸಾಧನೆ ಎನ್ನುತ್ತಿದ್ದೀರಿ?
ಇತರರು ಹೋರಾಟಕ್ಕೆ ಸ್ಪಂದಿಸಿದ್ದಾರೆ. ಆದರೆ ಕ್ಷೇತ್ರಕ್ಕೆ ನೀರು ತರಲು ನಾನೇ ‘ಹೇಮಾವತಿ ಸೃಷ್ಟಿಕರ್ತ’. ಈ ಭಾಗದ ಸಂಸದರಾಗಿದ್ದ ಮೂಡಲಗಿರಿಯಪ್ಪ ಹೇಮಾವತಿ ಯೋಜನೆ ಬೇಡ. ಹಿರಿಯೂರು ತಾಲ್ಲೂಕಿನಲ್ಲಿ ಅಣೆಕಟ್ಟೆ ನಿರ್ಮಿಸಿ ಅಲ್ಲಿಂದ ನೀರು ತಂದರೆ ಸಾಕು ಎಂದರು. ಆದರೆ ರಾಜಕೀಯ ಮಾಡದೆ ಹೇಮಾವತಿ ನೀರು ಹರಿಸಲು ಪ್ರಯತ್ನಿಸಿದೆ.
ಕೃಷಿ ಮಂತ್ರಿ ಆಗಿದ್ದರಿಂದ ನೀರು ತರಲು ಸಾಧ್ಯವಾಯಿತು. ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ನನ್ನ ಹೋರಾಟದ ಫಲ. ಭದ್ರಾ ಮೇಲ್ದಂಡೆಗೆ ₹4,440 ಕೋಟಿ ಖರ್ಚಾಗಿದೆ. ಎತ್ತಿನಹೊಳೆಗೂ ₹7 ಸಾವಿರ ಕೋಟಿ ವೆಚ್ಚವಾಗಿದೆ. ಕಾವೇರಿ, ಪಶ್ಚಿಮಘಟ್ಟ, ಭದ್ರಾದಿಂದ ನೀರು ತಂದು ಕ್ಷೇತ್ರವನ್ನು ‘ತ್ರಿವೇಣಿ ಸಂಗಮ’ ಮಾಡುವ ಕನಸು ಹೊತ್ತಿದ್ದೇನೆ. ಇದೇ ನನ್ನ ಗುರಿ.
* ನಿಮ್ಮ ಪ್ರಬಲ ಎದುರಾಳಿ ಯಾರು?
ತ್ರಿಕೋನ ಸ್ಪರ್ಧೆ ಇದೆ. ಜೆಡಿಎಸ್ ಅಭ್ಯರ್ಥಿಗೆ ರಾಜಕೀಯ ಗಂಧ, ಗಾಳಿ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಡಾಕ್ಟರ್ ಮತ್ತು ಬಿಸಿನೆಸ್ಮನ್. ಇದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ.
* ನಿಮ್ಮ– ರಾಜಣ್ಣ ನಡುವಿನ ಮುನಿಸು ಕಡಿಮೆ ಆಗಿದೆಯೆ?
ವರಿಷ್ಠರು ಎಲ್ಲವನ್ನೂ ಸರಿಮಾಡಿದ್ದಾರೆ. ಶಾಸಕ ಡಾ.ಜಿ.ಪರಮೇಶ್ವರ– ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ನಡುವೆ ಈಗ ವೈಮನಸ್ಸು ಇಲ್ಲ. ಜತೆಯಲ್ಲಿ ಪ್ರಚಾರ ನಡೆಸಿದ್ದಾರೆ. ರಾಜಣ್ಣ, ಸಾಸಲು ಸತೀಶ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
* ಯುವಕರನ್ನು ಬೆಳೆಸಲಿಲ್ಲ ಎಂಬ ಆರೋಪವಿದೆ?
ಯುವಕರು ರಾಜಕಾರಣಕ್ಕೆ ಬರುತ್ತಿದ್ದು, ಅವರಿಗೆ ಭವಿಷ್ಯ ರೂಪಿಸುವುದು ಮುಖ್ಯ. ಹೊಸ ರಕ್ತ ಹರಿಯಬೇಕು.ನಾನೇ ಎಷ್ಟು ದಿನ ಇರಲಾಗುತ್ತದೆ. ಎಲ್ಲರನ್ನೂ ಸಮಾನವಾಗಿ ಪ್ರೋತ್ಸಾಹಿಸಿದ್ದೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.