ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಉಪಚುನಾವಣೆ | ಕಾರ್ಯಕರ್ತರು ಪಕ್ಷ ಬಿಟ್ಟಿಲ್ಲ: ಅಮ್ಮಾಜಮ್ಮ

ಸಂದರ್ಶನ
Last Updated 28 ಅಕ್ಟೋಬರ್ 2020, 2:27 IST
ಅಕ್ಷರ ಗಾತ್ರ

ಎಂದೂ ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಳ್ಳದ ಅಮ್ಮಾಜಮ್ಮ ಅವರು ಪತಿ ಸತ್ಯನಾರಾಯಣ ನೆರಳಿನಲ್ಲೇ ಬೆಳೆದು ಬಂದವರು. ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರ ನಡೆಸಿದವರು. ಈಗ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.

* ಯಾವ ವಿಚಾರ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಪತಿ ಸತ್ಯನಾರಾಯಣ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೀರಾವರಿ ವಿಚಾರದಲ್ಲಿ ಹೋರಾಟ ನಡೆಸಿದ್ದು, ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸಿದ್ದಾರೆ. ಸಾವಿರಾರು ಜನರಿಗೆ ಬಗರ್‌ಹುಕುಂ ಸಾಗುವಳಿ ಚೀಟಿ ಕೊಡಿಸಿದ್ದಾರೆ. ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷರಾಗಿದ್ದ ಸಮಯದಲ್ಲೂ ಕ್ಷೇತ್ರದ ಜನರ ಕೆಲಸ ಮಾಡಿಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ಅದನ್ನು ನೋಡಿ ಮತಕೊಡಿ, ನಾನೂ ಕೆಲಸಮಾಡಿ ತೋರಿಸುತ್ತೇನೆ.

* ಪಕ್ಷದ ನಾಯಕರ ಒತ್ತಾಯದಿಂದ ಸ್ಪರ್ಧಿಸಿದ್ದೀರಿ ಎಂಬ ಮಾತಿದೆ?

ರಾಜಕೀಯ ಅನುಭವ ಇಲ್ಲ. ಆದರೆ ಈಗಿನ ಕಷ್ಟದ ಪರಿಸ್ಥಿತಿಯಲ್ಲಿ ಸ್ಪರ್ಧಿಸಿದ್ದೇನೆ. ಹಿಂದೆ ಪತಿ ಜತೆ ಪ್ರಚಾರ ಮಾಡಿದ್ದೇನೆ. ನಾನು ಹಳ್ಳಿಯಲ್ಲಿ ಹುಟ್ಟಿದ ಹೆಣ್ಣು ಮಗಳು. ಗ್ರಾಮೀಣ ಜನರ ಕಷ್ಟ, ಸುಖದ ಅರಿವಿದೆ. ಯಜಮಾನರು ಶಾಸಕರಾಗಿದ್ದಾಗ ಕಾರ್ಯಕರ್ತರ ಜತೆ ಬೆರೆತಿದ್ದೇನೆ.

* ಪ್ರಮುಖ ನಾಯಕರು ಪಕ್ಷ ತೊರೆದಿದ್ದು, ಹಿನ್ನಡೆಯಲ್ಲವೆ?

ಯಾರೂ ಜೆಡಿಎಸ್ ಬಿಟ್ಟು ಹೋಗಿಲ್ಲ. ಕೆಲ ನಾಯಕರು ಪಕ್ಷದಿಂದ ಹೊರ ಹೋಗಿದ್ದರೂ ಕಾರ್ಯಕರ್ತರ ಪಡೆ ನಮ್ಮೊಂದಿಗೆ ಇದೆ. ಅಧಿಕಾರ, ಹಣ, ಇತರೆ ಆಮಿಷಗಳಿಗೆ ಒಳಗಾಗಿ ಹಾಗೂ ಆಡಳಿತ ಪಕ್ಷದಲ್ಲಿನ ಆಕರ್ಷಣೆಯಿಂದ ಪಕ್ಷ ಬಿಟ್ಟಿದ್ದಾರೆ. ಇದರಿಂದ ಯಾವುದೇ ಪರಿಣಾಮ ಬೀರಲ್ಲ. ಮತ ಹಾಕುವ ಜನರು ನಮ್ಮ ಜತೆಗೆ ಇದ್ದಾರೆ.

* ಕೊರೊನಾ ಸೋಂಕಿನಿಂದಾಗಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ?

ಹೌದು, ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಿದೆ. ಆದರೆ ನಮ್ಮ ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಇತರೆ ನಾಯಕರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಗೌಡರೇ ನಮ್ಮೆಲ್ಲರ ಶಕ್ತಿ ಆಗಿರುವುದರಿಂದ ಪ್ರಚಾರ ಸುಲಲಿತವಾಗಿ ನಡೆದಿದೆ.

* ಜಿಲ್ಲಾ ಮಟ್ಟದ ನಾಯಕರು ಪ್ರಚಾರದಲ್ಲಿ ಕಾಣಿಸುತ್ತಿಲ್ಲ?

ಈಗ ಎಲ್ಲವೂ ಸರಿ ಹೋಗಿದೆ. ದೇವೇಗೌಡರು ಎಲ್ಲರ ಜತೆಗೆ ಮಾತನಾಡಿದ್ದು, ಪ್ರಚಾರಕ್ಕೆ ಕರೆತಂದು ಜವಾಬ್ದಾರಿ ನೀಡಿದ್ದಾರೆ. ಯಾವ ಮುಖಂಡರಲ್ಲೂ ಸಿಟ್ಟು, ಮುನಿಸು, ಕೋಪ, ತಾಪ ಇಲ್ಲ. ಇತರೆ ಪಕ್ಷಗಳಲ್ಲಿ ಇದ್ದಂತೆ ನಮ್ಮಲ್ಲೂ ಸಣ್ಣಪುಟ್ಟ ಸಮಸ್ಯೆಗಳು ಇವೆ. ಚುನಾವಣೆ ಸಮೀಪಿಸಿದಂತೆ ಎಲ್ಲವೂ ಸರಿ ಹೋಗುತ್ತದೆ. ನಮ್ಮ ಕಾರ್ಯಕರ್ತರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.

* ಜನರ ಅನುಕಂಪ ಮತವಾಗಿ ಬದಲಾಗಬಹುದಾ?

ಸತ್ಯನಾರಾಯಣ ಅವರು ಶಾಸಕರಾಗಿ ಪೂರ್ಣಾವಧಿ ಕೆಲಸ ಮಾಡಬೇಕು ಎಂಬುದು ಕ್ಷೇತ್ರದ ಜನರ ಆಶಯವಾಗಿತ್ತು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ. ಜನರ ಬಳಿ ವಿಶ್ವಾಸ, ನಂಬಿಕೆ ಉಳಿಸಿಕೊಂಡಿದ್ದರು. ಸಜ್ಜನ, ಸರಳ ವ್ಯಕ್ತಿ ಎನಿಸಿಕೊಂಡಿದ್ದರು. ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಕ್ಷೇತ್ರದಲ್ಲಿ ಅನುಕಂಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT