ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ವಿ.ಆನಂದಮೂರ್ತಿ ಬರಹ | ಬಕಾಲ ಮುನಿಗೆ ನಮಸ್ಕಾರ

Last Updated 19 ಅಕ್ಟೋಬರ್ 2019, 20:04 IST
ಅಕ್ಷರ ಗಾತ್ರ

ಕೆ.ಬಿ.ಸಿದ್ದಯ್ಯ ಅಂದ್ರೆ ನಮ್ಮ ಪಾಲಿಗೆ ಹೊಸ ಎಚ್ಚರದ ಕವಿ, ನಿರ್ಭೀತ ಸಾಮಾಜಿಕ ಹೋರಾಟಗಾರ ಎನ್ನುವುದು ಸಾಹಿತಿ ಜಿ.ವಿ.ಆನಂದಮೂರ್ತಿ ಅವರ ಅಭಿಪ್ರಾಯ. ಅಗಲಿದ ಒಡನಾಡಿಯನ್ನು ಅವರು ನೆನೆಯುವುದು ಹೀಗೆ...

---

ಕೆ.ಬಿ.ಸಿದ್ದಯ್ಯ ಅವರನ್ನು ನಾವೆಲ್ಲ ಪ್ರೀತಿಯಿಂದ ‘ಕೇಬಿ’ ಎಂದೇ ಕರೆಯುತ್ತಿದ್ದೆವು. ಸಾರ್ವಜನಿಕ ಜೀವನದಲ್ಲೂ ಅವರು ‘ಕೇಬಿ’ ಎಂದೇ ಪ್ರಸಿದ್ಧರು.

ಯಾರೂ ತುಳಿಯದ ಹಾದಿಯಲ್ಲಿ ನಡೆದ ಕೆಲವೇ ಕವಿಗಳ ಪೈಕಿ ಕೆ.ಬಿ.ಸಿದ್ದಯ್ಯ ಪ್ರಮುಖರು. ಕವಿ, ಸಾಮಾಜಿಕ ಚಿಂತಕ, ಸಮಾನತೆಯ ಪರವಾದ ಹೋರಾಟಗಾರ ಹಾಗೂ ಇದೆಲ್ಲದರಷ್ಟೇ ಮುಖ್ಯವಾಗಿ ಸಾಹಿತ್ಯವಾಗಿ ಮತ್ತು ಸಾಮಾಜಿಕವಾಗಿ ಮಹತ್ವಾಕಾಂಕ್ಷಿಯಾಗಿದ್ದರು. ಕೆ.ಬಿ.ಸಿದ್ದಯ್ಯ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಿಗೆ ಸೂಕ್ಷ್ಮತೆ ಮತ್ತು ಖಚಿತತೆಯ ಪ್ರಖರ ಬೆಳಕಿನಂತಿದ್ದರು. ಹೆಚ್ಚು ಒಡನಾಟ ಇಲ್ಲದವರಿಗೆ ಒಗಟಿನಂತಿದ್ದರು.

ನಾವೆಲ್ಲ ಅವರ ಒಡನಾಟದಲ್ಲಿ ಸುಮಾರು 37– 38 ವರ್ಷಗಳ ಕಾಲ ಇದ್ದವರು. ಆದ್ದರಿಂದ ನಮಗೆಲ್ಲ ಕೇಬಿ ಅಂದರೆ ಅವರು ಹೊಸ ಎಚ್ಚರದ ಕವಿಯೂ ಹೌದು. ಹಾಗೆಯೇ ನಿರ್ಭೀತತೆಯ ಸಾಮಾಜಿಕ ಹೋರಾಟಗಾರನೂ ಹೌದು. ಕೇಬಿ ಅವರ ಈ ಎರಡೂ ವ್ಯಕ್ತಿತ್ವಗಳನ್ನು ನಾವು ಚೆನ್ನಾಗಿ ಬಲ್ಲೆವು.

70–80ರ ದಶಕದಲ್ಲಿ ಕೇಬಿ ಸಿದ್ದಯ್ಯ ದಲಿತ ಸಂಘರ್ಷ ಸಮಿತಿಯ ಪ್ರಖರ ಹೋರಾಟಗಾರರಾಗಿದ್ದರು. ಮೈಸೂರಿನ ಸಮಾಜವಾದಿಗಳು, ವಿದ್ಯಾರ್ಥಿ ಹೋರಾಟಗಳು ಮುಂತಾದವು ಅವರನ್ನು ರೂಪಿಸಿದ್ದವು. ಅವರಲ್ಲಿನ ಅಪರಿಮಿತ ಸಾಮಾಜಿಕ ಬದ್ಧತೆ ಹಾಗೂ ಸಮಾಜವನ್ನು ಅವರು ನಿರ್ವಚಿಸುತ್ತಿದ್ದ ರೀತಿ ನಮ್ಮನ್ನೆಲ್ಲ ಅವರೆಡೆಗೆ ಸುಲಭವಾಗಿ ಆಕರ್ಷಿಸಿತು. ಇವುಗಳ ಜತೆಗೆ ಆಗ ದಲಿತ ಮತ್ತು ಎಲ್ಲ ಶೋಷಿತರ ಹೋರಾಟದ ಧ್ವನಿಯಾಗಿದ್ದ ‘ಪಂಚಮ’ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಕತ್ತಲೊಡನೆ ಮಾತುಕತೆ’ ಎನ್ನುವ ಕೇಬಿ ಅವರ ಅಂಕಣ, ಅಸ್ಪೃಶ್ಯತೆ ಹಾಗೂ ಅಸಮಾನತೆಯ ಅನುಭವ ಕಥನ ಕಣ್ಣಿಗೆ ಮತ್ತು ಕರುಳಿಗೆ ನಾಟುವಂತೆ ನಮ್ಮನ್ನು ಸೆಳೆದಿತ್ತು. ಅವರ ಈ ಎಲ್ಲ ಬರಹಗಳೂ ಅಸಮಾನತೆಯ ಇಂದಿನ ರೋಗಗ್ರಸ್ತ ಸಮಾಜಕ್ಕೆ ಹೆಚ್ಚು ಪ್ರಸ್ತುತವೇ.

ಆಗ ನಾವೆಲ್ಲ ಪದವಿ ತರಗತಿಗಳನ್ನು ದಾಟಲಾಗದೆ ಎಡವುತ್ತಾ, ತೆವಳುತ್ತಿದ್ದೆವು. ಅಸ್ಪಷ್ಟತೆ– ಗೊತ್ತು ಗುರಿ ಇಲ್ಲದ ಅಲೆದಾಟ ನಮ್ಮನ್ನು ಆವರಿಸಿಕೊಂಡಿದ್ದವು. ಆಗ ಕೇಬಿ ನಮ್ಮನ್ನು ಆವರಿಸಿಕೊಂಡರು. ಒಂದು ಹಳೆಯ ಸೈಕಲ್‌, ಒರಟಾದ ಬಟ್ಟೆ, ಗಡ್ಡದ ಮುಖ, ಹೊಳೆಯುವ ಕಣ್ಣುಗಳು, ಸದಾ ಬಗಲ ಬ್ಯಾಗಿನಲ್ಲಿ ತುಂಬಿರುತ್ತಿದ್ದ ‘ಪಂಚಮ’ ಪತ್ರಿಕೆ, ಇಂಗ್ಲಿಷ್‌ ಪುಸ್ತಕ, ಕರಪತ್ರಗಳು ನಮ್ಮನ್ನು ಇನ್ನಿಲ್ಲದಂತೆ ಆಕರ್ಷಿಸಿದವು. ‘ಈ ನಾಡ ಮಣ್ಣಿನಲ್ಲಿ...’ ಎನ್ನುವ ಅವರ ಹಾಡು ದಲಿತ ಹೋರಾಟಗಾರರ ನಡುವೆ ಪ್ರಸಿದ್ಧವಾಗಿತ್ತು.

ಜಾತ್ಯತೀತ ಹಾಗೂ ಮಾನವೀಯ ಗುಣಗಳಿಂದ ತುಳುಕುತ್ತಿದ್ದ ಅವರ ವ್ಯಕ್ತಿತ್ವ ತುಮಕೂರಿನಲ್ಲಿ ಆ ಕಾಲದ ಎಲ್ಲ ವಿದ್ಯಾರ್ಥಿಗಳ ನಾಲಗೆ ಮೇಲೆ ಹರಿದಾಡುತ್ತಿತ್ತು. ದಲಿತ ಸಂಘರ್ಷ ಸಮಿತಿಯ ಸಭೆಗಳಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳು ಯಾವುದೇ ಗೊಂದಲಗಳಿಲ್ಲದೆ ಎಲ್ಲರನ್ನೂ ತಲುಪುತ್ತಿದ್ದವು. ದಲಿತರನ್ನೂ ಒಳಗೊಂಡು ಎಲ್ಲ ಅಸಹಾಯಕ ಹಾಗೂ ತಬ್ಬಲಿ ಜಾತಿಗಳ ಯುವಕರನ್ನು ಹುಡುಕಿ ಅವರನ್ನು ಸೂಕ್ಷ್ಮಗೊಳಿಸುವ ಕಲೆ ಅವರಿಗೆ ಒಲಿದಿತ್ತು.

ಕೇಬಿ ಮೇಲುನೋಟಕ್ಕೆ ತುಸು ಹೆಚ್ಚು ಎನಿಸುವಷ್ಟು ಅಶಿಸ್ತಿನ ವ್ಯಕ್ತಿ. ಈ ಅಶಿಸ್ತು ಅವರ ಸೃಜನಶೀಲ ಬರವಣಿಗೆಗೆ ಮಾತ್ರ ಸೀಮಿತವಾಗಿತ್ತು. ಆದರೆ, ಸಾಮಾಜಿಕವಾಗಿ ಅವರು ಕ್ರಿಯಾಶೀಲರೇ ಆಗಿದ್ದರು. ಕೇಬಿ ಎಂದರೆ ಬರವಣಿಗೆಯ ಸೋಮಾರಿ ಎಂದೇ ಎಲ್ಲೆಡೆ ಪ್ರಖ್ಯಾತವಾಗಿತ್ತು. ಅವರಿಂದ ಏನಾದರೂ ಬರೆಸಬೇಕೆಂದವರಿಗೆ ಏಳುಕೆರೆ ನೀರು ಕುಡಿದಷ್ಟು ಅನುಭವವಾಗುತಿತ್ತು. ಹಾಗೆಂದು ಕೇಬಿ ಅವರ ಸೃಜನಶೀಲ ಮನಸ್ಸು ಎಂದೂ ಜಡ್ಡುಗಟ್ಟಿರಲಿಲ್ಲ.

ಇದಕ್ಕೆಲ್ಲ ಉದಾಹರಣೆ ಅವರು ಇದುವರೆಗೂ ಬರೆದಿರುವ ‘ಬಕಾಲ’, ‘ದಕ್ಕಲದೇವಿ ಕಾವ್ಯ’, ‘ಗಲ್ಲೆಬಾನಿ’, ‘ಅನಾತ್ಮ’ ಕಾವ್ಯಗಳಲ್ಲಿ ವ್ಯಕ್ತಿ ವಿಶಿಷ್ಟತೆಯ ಗುಣಗಳನ್ನು ಇಂದಿನ ಕನ್ನಡ ಕಾವ್ಯಲೋಕ ಚೆನ್ನಾಗಿ ಅರಿತಿದೆ. ಆದ್ದರಿಂದ ಇಂದು ಕೇಬಿ ಸಿದ್ದಯ್ಯ ಎನ್ನುವುದು ಇಂದಿನ ಕನ್ನಡ ಕಾವ್ಯದ ಅವಿಭಾಜ್ಯ ಹೆಸರಾಗಿದೆ.

ಕೇಬಿ ಬಹಿರಂಗದ ಜೀವನದಲ್ಲಿ ಹೆಚ್ಚು ಉದಾರಿ ಹಾಗೂ ದುಡುಕುತನವಿಲ್ಲದ ವಿಶಿಷ್ಟ ಶೈಲಿಯ ಮಾತುಗಾರ. ಆದರೆ, ಕಾವ್ಯದಲ್ಲಿ ಮಾತ್ರ ಕೇಬಿ ಅವರದು ರೂಪಕದ ಮಾಂತ್ರಿಕ ಭಾಷೆ. ಆದ್ದರಿಂಲೇ ಅವರಿಗೆ ‘ಅಲ್ಲಮ’ ಹೆಚ್ಚು ಪ್ರಿಯವಾದ ಕವಿ. ದಲಿತ ಲೋಕದ ಮನೋ ಲೋಕಕ್ಕೆ ಇಳಿದು; ತನ್ನ ಸಮುದಾಯದ ಪುರಾಣಗಳನ್ನು, ಮೌಖಿಕ ಚರಿತ್ರೆಯನ್ನು ಮೇಲೆ ತಂದು ಅದನ್ನು ವಿಶಿಷ್ಟ ನುಡಿಗಟ್ಟಿನಲ್ಲಿ ಕಟ್ಟಿಕೊಡುತ್ತಿದ್ದರು. ಇದು ಅವರು ಕಾವ್ಯ ಮಾರ್ಗದಲ್ಲಿ ಕಂಡುಬರುವ ದೊಡ್ಡಗುಣ. ಆದ್ದರಿಂದಲೇ ಕನ್ನಡದ ವಿಮರ್ಶಾ ಜಗತ್ತು ಕಥನ ಮಾರ್ಗದಲ್ಲಿ ದೇವನೂರ ಮಹಾದೇವ ಅವರನ್ನು, ಕಾವ್ಯದಲ್ಲಿ ಕೇಬಿ ಸಿದ್ದಯ್ಯ ಅವರನ್ನು ವಿಶೇಷವಾಗಿ ವಿಶ್ಲೇಷಿಸುತ್ತಿತ್ತು. ಸಿದ್ದಯ್ಯನವರದ್ದು ಹೇಳಿ ಕೇಳಿ ಶಿಷ್ಟ ಮಾರ್ಗವಲ್ಲ. ಅದು ಈ ನೆಲದ ಅವಧೂತ ಮತ್ತು ಮೌಖಿಕ ಪರಂಪರೆಗಳಿಗೆ ಹತ್ತಿರವಾದದ್ದು.

ಇಂಗ್ಲಿಷ್ ಅಧ್ಯಾಪಕರಾಗಿದ್ದ ಕೇಬಿ ನೀರು ಕುಡಿದ ಹಾಗೆ ಇಂಗ್ಲಿಷನ್ನು ಬಳಸುತ್ತಿದ್ದರು. ಕನ್ನಡವಲ್ಲದೆ ಬೇರೇನೂ ಗೊತ್ತಿಲ್ಲದ ನಮಗೆ ಇದೇ ದೊಡ್ಡ ಸಂಗತಿಯಾಗಿತ್ತು. ಶೇಕ್ಸ್‌ಪಿಯರ್‌ನ ಸಾನೆಟ್‌ಗಳು, ನೆಲ್ಸನ್‌ಮಂಡೆಲಾ ಬರಹ, ಅಂಬೇಡ್ಕರ್‌ ಅವರ ಬರಹಗಳಲ್ಲಿ ಬೆಳಕನ್ನು ಕೇಬಿ ನಮಗೆ ತೋರಿಸುತ್ತಿದ್ದರು. ಅಲ್ಲಮನ ವಚನಗಳ ಮೂಲಕವೇ ಕಾವ್ಯ ವಿಮರ್ಶೆ ಹಾಗೂ ಸಾಮಾಜಿಕ ಚಿಂತನೆಗಳನ್ನು ತೊಡಕಿಲ್ಲದಂತೆ ನಿರ್ವಚಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ‘ಅಲ್ಲಮಪ್ರಭು’ ಎಂಬ ಕಿರುಹೊತ್ತಗೆಯನ್ನು ಸಂಪಾದಿಸಿಕೊಟ್ಟಿದ್ದಾರೆ.

ಇವೆಲ್ಲಕ್ಕೂ ಶಿಖರವೆನ್ನುವಂತೆ ‘ಬುದ್ಧ ದೇವ’ನ ವಿಚಾರಗಳು ಕೇಬಿ ಅವರನ್ನು ಆವರಿಸಿಕೊಂಡಿದ್ದವು. ತುಮಕೂರಿನಲ್ಲಿ 90ರ ದಶಕದಲ್ಲಿ ನಾವು ಮೊದಲು ‘ಬುದ್ಧಜಯಂತಿ’ಯನ್ನು ಆಚರಿಸಿದ್ದು ಅವರ ಮನೆಯಂಗಳದಲ್ಲಿ. ಅಂದಿನ ಬುದ್ಧಪ್ರಭೆಯ ಕಾರ್ಯಕ್ರಮದಲ್ಲಿ ಕವಿ ವೀಚಿ, ಎಚ್‌.ಜಿ.ಸಣ್ಣಗುಡ್ಡಯ್ಯ, ಕೆ.ಜಿ.ನಾಗರಾಜಪ್ಪ, ಸಾಮಾಜಿಕ ಹೋರಾಟಗಾರ ಕೆ.ಆರ್‌.ನಾಯಕ್‌, ನೂರುಲ್ಲಾ ಖಾನ್‌ ಮುಂತಾದವರು ಭಾಗವಹಿಸಿದ್ದ ನೆನಪು ಈಗಲೂ ಅಚ್ಚಹಸುರಾಗಿದೆ. ಈ ಸಂಬಂಧದಲ್ಲಿ ಅವರು ಕವಿ ವೀಚಿ ಅವರೊಡನೆ ಜತೆಯಾಗಿ ಗುರು ಆಜಾನ್‌ ಸುಮೆಧೊ ಅವರ ಬುದ್ಧನ ಬೋಧನೆಗಳನ್ನು ಒಳಗೊಂಡ ಕೃತಿಯನ್ನು ‘ನಾಲ್ಕು ಶ್ರೇಷ್ಟ ಸತ್ಯಗಳು’ ಎನ್ನುವ ಹೆಸರಿನಲ್ಲಿ ಅನುವಾದಿಸಿದ್ದಾರೆ. ಇದೂ ಕೂಡ ಮುಖ್ಯವಾದ ಕೃತಿ.

ಕೇಬಿ ಸಾಮಾಜಿಕ ಜೀವನದಲ್ಲಿ ತುಸು ರಾಜಕೀಯ ಸ್ವಭಾವ. ಆದರೆ, ಹೋರಾಟದಲ್ಲಿ ಹಾಗೂ ಬರವಣಿಗೆಯಲ್ಲಿ ಅವರು ಯಾವುದಕ್ಕೂ ಮಣಿಯುತ್ತಿರಲಿಲ್ಲ. ಒಮ್ಮೆ ತುಮಕೂರಿನಲ್ಲಿ ಪ್ರಖ್ಯಾತ ಕವಿಯೊಬ್ಬರ ಕವಿತೆಗಳ ವಾಚನವನ್ನು ನಾವು ಏರ್ಪಡಿಸಿದ್ದೆವು. ಇಂತಹ ಚರ್ಚೆಗಳಿಗಾಗಿಯೇ ಅವರೇ ರೂಪಿಸಿದ್ದ ‘ಚಲನವೇದಿಕೆ’ಯೂ ನಮ್ಮೊಡನಿತ್ತು. ಕಾವ್ಯವಾಚನದ ನಂತರ ಆ ಪ್ರಸಿದ್ಧ ಕವಿ ಕೇಬಿ ಅವರಿಂದ ‘ಹೊಗಳಿಕೆಯ’ ಮಾತುಗಳನ್ನು ನಿರೀಕ್ಷಿಸಿದ್ದರು. ಆದರೆ, ಕೇಬಿ ಅತ್ಯಂತ ನಿರ್ಭೀತಿಯಿಂದ ಯಾವ ಕರುಣೆಯೂ ಇಲ್ಲದೆ ಆ ಪ್ರಸಿದ್ಧ ಕವಿಯ ಕವಿತೆಗಳ ನ್ಯೂನತೆಗಳನ್ನು ವಿಮರ್ಶಿಸಿದರು. ಅಂದಿನಿಂದ ಆ ಕವಿ ಕೇಬಿ ಅವರಿಂದ ದೂರವೇ ಉಳಿದರು.

ಹೀಗೆ ಕೇಬಿ ಎಲ್ಲ ಕಟ್ಟುಗಳಿಗೂ ಸುಲಭವಾಗಿ ಸಿಕ್ಕಿ ಬೀಳುವ ವ್ಯಕ್ತಿತ್ವದವರಲ್ಲ! ಅವರಲ್ಲಿರುವ ಕವಿ ಒಬ್ಬ ವಿರಾಗಿಯಂತೆ - ಸಂತನಂತೆ- ನಮಗೆ ಗೋಚರಿಸುತ್ತಾರೆ. ಆದ್ದರಿಂದಲೇ ಅವರನ್ನು ಎಲ್ಲರೂ ಈಚೆಗೆ ‘ಬಕಾಲ’ ಎನ್ನುವ ಹೆಸರಿನಿಂದಲೇ ಕರೆಯುತ್ತಿದ್ದರು. ಇದೊಂದು ಅರ್ಥಪೂರ್ಣವಾದ ಉಪನಾಮ. ಎಲ್ಲ ಕವಿಗಳಿಗೂ ಇದು ದಕ್ಕುತ್ತದೆ ಎಂದು ಹೇಳಲಾಗದು! ಅವರಿಂದ ಇನ್ನಷ್ಟು ಕವಿತೆ, ಗದ್ಯ ಬರಬೇಕಾಗಿತ್ತು. ಆದರೆ ‘ಕಾಲ’ ಅವರನ್ನು ಇಲ್ಲಿ ಇರಗೊಡಲಿಲ್ಲ! ಈ ಅರ್ಥದಲ್ಲಿ ಕೇಬಿ ಇಲ್ಲದ ಇಂದಿನ ಕನ್ನಡ ಕಾವ್ಯ ತನ್ನ ಒಂದು ವಿಶಿಷ್ಟ ಧ್ವನಿಯನ್ನು ಕಳೆದುಕೊಂಡಿದೆ ಎಂದಷ್ಟೇ ಹೇಳಬಹುದು.

ತುಮಕೂರಿನ ನಾವೆಲ್ಲ ಅಂದು ನಮ್ಮೆಲ್ಲರ ಗುರು ಕೆ.ಎಂ.ಶಂಕರಪ್ಪ, ಕವಿ ವೀಚಿ, ಎಚ್.ಜಿ.ಸಣ್ಣಗುಡ್ಡಯ್ಯ ಅವರಂತಹ ಮೇರು ವ್ಯಕ್ತಿಗಳನ್ನು ಕಳೆದುಕೊಂಡು ಮೌನ ಮತ್ತು ನೋವಿನಲ್ಲಿ ಮುಳುಗಿದ್ದೆವು. ಇಂದು ‘ಬಕಾಲ ಮುನಿ’ ನಮ್ಮ ಪ್ರೀತಿಯ ಕೇಬಿಯನ್ನು ಕಳೆದುಕೊಂಡಿದ್ದೇವೆ. ನಮ್ಮೆದುರಿನ ಎಲ್ಲ ಭರವಸೆಯ ಹಾಗೂ ದಾರಿ ತೋರುತ್ತಿದ್ದ ದೀಪಗಳೆಲ್ಲ ನಂದುತ್ತಿವೆ. ಆದರೆ, ಅವರು ಹತ್ತಿಸಿದ ಬೆಳಕು ಇನ್ನೂ ಇದೆ.......

ಅದೇ ನಮಗುಳಿದಿರುವ ಏಕೈಕ ಭರವಸೆ.

ಹೋಗಿ ಬನ್ನಿ ಬಕಾಲ ಮುನಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT