ಕೆಜಿಎಫ್: ನಗರದ ಕೃಷ್ಣಾಪುರ ಚೆಕ್ ಪೋಸ್ಟ್ನಲ್ಲಿ ಚುನಾವಣಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ರಾಬರ್ಟಸನ್ಪೇಟೆ ಕಂದಾಯ ಅಧಿಕಾರಿ ಭಾಸ್ಕರ್ ಮದ್ಯ ಸೇವಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಭಾಸ್ಕರ್ ನಡುರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ, ’ನನ್ನ ಜೊತೆ ಇರಬೇಕಾಗಿದ್ದ ಪೊಲೀಸರು ಕರ್ತವ್ಯದಲ್ಲಿ ಇಲ್ಲ. ನಾನೊಬ್ಬನೇ ಎಲ್ಲ ಕೆಲಸ ಮಾಡಬೇಕಾಗಿದೆ. ಎಲ್ಲ ವಾಹನಗಳನ್ನು ನಾನೊಬ್ಬನೇ ತಪಾಸಣೆ ಮಾಡಬೇಕಾಗಿದೆ‘ ಎಂದು ದೂರು ಹೇಳುತ್ತಿದ್ದರು.
ಡಿವೈಎಸ್ಪಿ ಪರಮೇಶ್ವರ ಹೆಗಡೆ ಮತ್ತು ಸಿಬ್ಬಂದಿ ಸ್ಥಳಕ್ಕೆ ಹೋದಾಗ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ಇದ್ದರು ಎನ್ನಲಾಗಿದೆ. ಭಾಸ್ಕರ್ ವರ್ತನೆಗೆ ಅನುಮಾನಗೊಂಡು ಊರಿಗಾಂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ನಂತರ ರಾಬರ್ಟಸನ್ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.
’ಘಟನೆ ನಡೆದಿರುವುದು ನಿಜ. ಮತ್ತೆ ಅವರನ್ನು ಚೆಕ್ ಪೋಸ್ಟ್ನಲ್ಲಿ ಬಿಟ್ಟು ಹೋಗಲಾಯಿತು. ಮತ್ತಷ್ಟು ಮಾಹಿತಿ ಬರಬೇಕಾಗಿದೆ‘ ಎಂದು ತಹಶೀಲ್ದಾರ್ ಕೆ.ರಮೇಶ್ ತಿಳಿಸಿದ್ದಾರೆ.