ಕುಣಿಗಲ್: ಶಿವರಾತ್ರಿಯಲ್ಲಿ ತಾಲ್ಲೂಕಿನ ಶನೇಶ್ವರಸ್ವಾಮಿ ಮತ್ತು ಶಿವಾಲಯಗಳಲ್ಲಿ ವಿಶೇಷ ಪೂಜೆ, ಜಾತ್ರೆಗಳು ನಡೆಯುತ್ತಿವೆ. ತಾಲ್ಲೂಕಿನ ಅಮೃತೂರು ಹೋಬಳಿಯ ಸೊಂಡೆಕೊಪ್ಪ ಗಾಳಿ ಆಂಜನೇಯಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಶಿವನ ಜತೆ ಆಂಜನೇಯನಿಗೂ ಪೂಜೆ ಸಲ್ಲಿಸಲಾಗುತ್ತದೆ. ಶಿವಾಂಜನೇಯ ಭಕ್ತರ ಸಂಗಮಕ್ಷೇತ್ರವಾಗಿ ಇದು ಪ್ರಸಿದ್ಧಿ ಪಡೆದಿದೆ.
ಗಾಳಿ ಆಂಜನೇಯಸ್ವಾಮಿ ದೇವಾಲಯ ಶಿಥಿಲವಾಗಿತ್ತು. ಅದನ್ನು ಗ್ರಾಮಸ್ಥರು ಮತ್ತೆ ನಿರ್ಮಿಸಿದರು. ಈ ದೇವಾಲಯ ನಿರ್ಮಾಣದ ಜತೆಯಲ್ಲಿಯೇ ಭಾವೈಕ್ಯತೆ ಸಾರುವ ಆದಿಲ್ ಸಾಬ್ ಗೋಪುರ ನಿರ್ಮಾಣ ಮಾಡಿದ್ದೂ ಇಲ್ಲಿನ ವಿಶೇಷ. 1939ರ ಏ.1ರಂದು ಈ ದೇವಾಲಯಕ್ಕೆ ಸ್ಪಷ್ಟ ರೂಪ ದೊರೆಯಿತು ಎನ್ನುತ್ತಾರೆ ಹಿರಿಯರು.
ಗ್ರಾಮ ಬೆಳೆದಂತೆ ದೇವಾಲಯವೂ ಪ್ರಗತಿ ಹೊಂದಿತು. 2014ರ ಫೆಬ್ರವರಿಯಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ತಮ್ಮ ಜೀವನದ ಮಹತ್ತರ ಕಾರ್ಯಗಳನ್ನು ಪ್ರಾರಂಭಿಸುವ ಮುನ್ನಾ ದೇವರಲ್ಲಿ ಹೂವಿನ ಪ್ರಸಾದ ಕೇಳುವುದು ಸುತ್ತಲಿನ ಗ್ರಾಮಗಳ ಭಕ್ತರ ವಾಡಿಕೆ.
ಯಾವುದೇ ಸರ್ಕಾರದ ಅನುದಾನ ಇಲ್ಲದೆ ಭಕ್ತರ ಸಹಕಾರದಿಂದ ಪ್ರವರ್ಧಮಾನಕ್ಕೆ ಬಂದಿರುವ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಶಿವರಾತ್ರಿ, ಶ್ರೀರಾಮನವಮಿ, ಹನುಮ ಜಯಂತಿ ನಡೆಸಲಾಗುತ್ತದೆ. ಶ್ರಾವಣಮಾಸದಲ್ಲಿ ವಿಶೇಷ ಪೂಜೆ ಜತೆಗೆ ಹೂ,, ಹಣ್ಣಿನ ಮತ್ತು ತರಕಾರಿ ಅಲಂಕಾರಗಳು ಭಕ್ತರ ಮನಸೂರೆಗೊಳ್ಳುತ್ತವೆ.
ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಯ ಸಾವಿರಾರು ಮಂದಿ ಭಕ್ತರು ಇಲ್ಲಿಗೆ ನಡೆದುಕೊಳ್ಳುವರು. ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಗ್ರಾಮದ ಎಲ್ಲ ದೇವರ ಸಮ್ಮುಖದಲ್ಲಿ ಜಾತ್ರೆ ನಡೆಲಿದೆ. ಕನಿಷ್ಠ 10 ಸಾವಿರ ಭಕ್ತರು ಪೂಜೆ ಸಲ್ಲಿಸಿ, ಹರಕೆ ತೀರಿಸುತ್ತಾರೆ ಎಂದು ದೇವಾಯಲ ಆಡಳಿತ ಮಂಡಳಿ ಸದಸ್ಯರು ಮಾಹಿತಿ ನೀಡಿದ್ದಾರೆ.