ತುರುವೇಕೆರೆ: ‘ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಎಸ್ಸೆಸ್ಸೆಲ್ಸಿವರೆಗೆ ಓದಿಸಿದ್ದೇ ಹೆಚ್ಚು. ಕಾಲೇಜಿಗೆ ಸೇರಿಸಲು ಸಾಧ್ಯವೇ ಇಲ್ಲ. ಏನಾದ್ರು ಕೆಲಸ ನೋಡಿಕೊ’
ವಿ.ಕೆ. ಮಂಜುನಾಥ್ ಅವರ ತಂದೆ ಖಡಾಖಂಡಿತವಾಗಿ ಹೇಳಿದ್ದ ಮಾತುಗಳಿವು. ಆದರೂ ಛಲ ಬಿಡದೆ ಓದಿದೆ ಮಂಜುನಾಥ್ ಕೆಪಿಎಸ್ಸಿ ಪರೀಕ್ಷೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಮಂಜುನಾಥ್ ಅವರ ತಂದೆ ಕೃಷ್ಣಪ್ಪ, ತಾಯಿ ನಿಂಗಮ್ಮ ರೈತರಾಗಿದ್ದ ಭೂಮಿಯಿಂದ ಬರುವ ಅಲ್ಪಸ್ವಲ್ಪ ಹಣದಿಂದ ಇಬ್ಬರು ಮಕ್ಕಳನ್ನು ಓದಿಸಿದ್ದರು. ಕಾಲೇಜು ರಜೆ ದಿನಗಳಲ್ಲಿ ಕೂಲಿ ಮಾಡಿ ಬಂದ ಹಣದಿಂದ ಪಠ್ಯಪುಸ್ತಕಗಳನ್ನು ಖರೀದಿಸಿ ಸ್ವಂತ ದುಡಿಮೆಯಿಂದಲೇ ಬಿಎ ಮತ್ತು ಎಂಎ ಪದವಿ ಮುಗಿಸಿದರು.
2001ರಲ್ಲಿ ಮಿಲಿಟರಿ ರ್ಯಾಲಿಯಲ್ಲಿ ಭಾಗವಹಿಸಿ ಸೈನಿಕನಾಗಿ ನೇಮಕಗೊಂಡು ಕಾರ್ಯನಿರ್ವಹಿಸಿ 2016ರಲ್ಲಿ ನಿವೃತ್ತಿ ಹೊಂದಿದರು.
2017ರಲ್ಲಿವಿ.ಕೆ.ಮಂಜುನಾಥ್ ಕೆಎಎಸ್ ಮುಖ್ಯ ಪರೀಕ್ಷೆ ಬರೆದರು. ಕೆಎಎಸ್ ಫಲಿತಾಂಶ ತಡವಾದ್ದರಿಂದ 2018ರಲ್ಲಿ ಸಬ್ಇನ್ಸ್ಪೆಕ್ಟರ್ ಪರೀಕ್ಷೆ ಬರೆದು ಬೆಂಗಳೂರಿನ ಬಸವನಗುಡಿ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
‘ಕೆಪಿಎಸ್ಸಿ ಫಲಿತಾಂಶ ಬಂದಿದ್ದು, ಒಳ್ಳೆಯ ಹುದ್ದೆ ಸಿಕ್ಕಿದ್ದೆ ಜನರಿಗೆ ಉತ್ತಮ ಸೇವೆ ಸಲ್ಲಿಸುವೆ’ ಎನ್ನುತ್ತಾರೆ ವಿ.ಕೆ.ಮಂಜುನಾಥ್