ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

89 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

8 ವಿಧಾನಸಭಾ ಕ್ಷೇತ್ರ; ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ
Last Updated 12 ಮೇ 2018, 4:55 IST
ಅಕ್ಷರ ಗಾತ್ರ

ದಾವಣಗೆರೆ: ‘ಜನತಂತ್ರದ ಹಬ್ಬ’ ಎಂದೇ ಕರೆಯುವ ಮತದಾನ ಇದೇ 12ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿದೆ. ಜಿಲ್ಲೆಯ 8 ಕ್ಷೇತ್ರಗಳಿಂದ 89 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜೆಡಿಯು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಾದೇಶಿಕ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇದು ಹಲವು ವಿಶೇಷಗಳ ಚುನಾವಣೆ:
ಈ ಬಾರಿಯ ಚುನಾವಣೆಗಳಲ್ಲಿ ಹಲವು ವಿಶೇಷತೆಗಳಿವೆ. ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ ‘ಪಿಂಕ್‌’ ಮತಗಟ್ಟೆಗಳನ್ನು ರೂಪಿಸಲಾಗಿದೆ. ಅಂಗವಿಕಲರನ್ನೂ ಮತಗಟ್ಟೆಗೆ ಸೆಳೆಯುವ ದೃಷ್ಟಿಯಿಂದ ಅವರ ಅನುಕೂಲಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ರ‍್ಯಾಂಪ್‌ ನಿರ್ಮಾಣ, ವ್ಹೀಲ್‌ ಚೇರ್‌ ವ್ಯವಸ್ಥೆ ಮಾಡಲಾಗಿದೆ.

ಮೊದಲ ಬಾರಿಗೆ ವಿ.ವಿ. ಪ್ಯಾಟ್‌ ಬಳಕೆ ಮಾಡುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಮತದಾರರಿಗೂ ಕುತೂಹಲ ಇದೆ. ಸುಗಮ ಹಾಗೂ ಶಾಂತಯುತ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಸಕಲ ಸಿದ್ಧತೆ ಮಾಡಿಕೊಂಡಿದೆ. ಮತದಾನದ ದಿನ ಹಾಗೂ ಮತ ಎಣಿಕೆ ದಿನ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂತೆ ಮತ್ತು ಜಾತ್ರೆಗಳನ್ನು ನಿಷೇಧಿಸಲಾಗಿದೆ.

ಮತ ಹಾಗೂ ಅಂಚೆ ಮತಪತ್ರಗಳ ಎಣಿಕೆ: ಮೇ 15ರಂದು ಎಲ್ಲ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ತೋಳಹುಣಸೆಯ ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ಬೆಳಿಗ್ಗೆ 8 ರಿಂದ ನಡೆಸಲಾಗುವುದು. ಅಲ್ಲದೇ, ಅಂಚೆಯ ಮೂಲಕ ಸ್ವೀಕೃತ ಮತಗಳ ಎಣಿಕೆಯನ್ನೂ ನಡೆಸಲಾಗುವುದು.

ಕಣದಲ್ಲಿರುವ ಪ್ರಮುಖರು:

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕರಾದ ಶಾಮನೂರು ಶಿವಶಂಕರಪ್ಪ, ವಡ್ನಾಳ್‌ ರಾಜಣ್ಣ, ಡಿ.ಜಿ. ಶಾಂತನಗೌಡ, ಎಂ.ಪಿ. ರವೀಂದ್ರ, ಎಚ್‌.ಪಿ. ರಾಜೇಶ್‌ ಮರು ಆಯ್ಕೆ ಬಯಸಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಮಾಯಕೊಂಡದಿಂದ ಹೊಸ ಮುಖ, ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಎಸ್‌. ಬಸವರಾಜ್‌ ಸ್ಪರ್ಧಿಸಿದ್ದಾರೆ. ಜೆಡಿಎಸ್‌ ಶಾಸಕ ಎಚ್‌.ಎಸ್. ಶಿವಶಂಕರ್‌ ಹರಿಹರದಲ್ಲಿ ಮತ್ತೆ ಕಣಕ್ಕಿಳಿದಿದ್ದಾರೆ. ಎಸ್‌. ರಾಮಪ್ಪ ಕಾಂಗ್ರೆಸ್‌ನಿಂದ ಎರಡನೇ ಬಾರಿ ಸ್ಪರ್ಧೆ ಮಾಡಿದ್ದಾರೆ.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್‌, ಬಿಜೆಪಿ ಅಭ್ಯರ್ಥಿಗಳಾದ ಮಾಡಾಳ್‌ ವಿರೂಪಾಕ್ಷಪ್ಪ, ಪ್ರೊ. ಲಿಂಗಣ್ಣ, ಎಸ್.ಎ. ರವೀಂದ್ರನಾಥ್, ಯಶವಂತರಾವ್‌ ಜಾಧವ್, ಎಸ್‌.ವಿ. ರಾಮಚಂದ್ರ, ಕರುಣಾಕರ ರೆಡ್ಡಿ, ಬಿ.ಪಿ. ಹರೀಶ್, ಎಂ.ಪಿ. ರೇಣುಕಾಚಾರ್ಯ ಚುನಾವಣಾ ಕಣದಲ್ಲಿರುವ ಪ್ರಮುಖರು.

ಚನ್ನಗಿರಿಯಲ್ಲಿ ಹೊದಿಗೆರೆ ರಮೇಶ್‌, ಹರಪನಹಳ್ಳಿಯಲ್ಲಿ ಈ ಹಿಂದೆ ಕೆಜೆಪಿಯಿಂದ ಸ್ಪರ್ಧಿಸಿದ್ದ ಕೊಟ್ರೇಶ್‌ ಜೆಡಿಎಸ್‌ನಿಂದ ಆಯ್ಕೆ ಬಯಸಿದ್ದಾರೆ. ಮಾಯಕೊಂಡದಲ್ಲಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಈ ಬಾರಿ ಜೆಡಿಯುನಿಂದ ಸ್ಪರ್ಧಿಸಿದ್ದಾರೆ.

* 8 ಮತ ಕ್ಷೇತ್ರಗಳು
* 16,32,949 ಮತದಾರರು
* 1, 946 ಮತಗಟ್ಟೆಗಳು
* 11,495 ಸಿಬ್ಬಂದಿ
* 15 ಪಿಂಕ್ ಮತಗಟ್ಟೆಗಳು
* 14,555 ಅಂಗವಿಲಕ ಮತದಾರರು
* 611 ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವ್ಹೀಲ್‌ಚೇರ್
* 2299 ಪಿಆರ್‌ಒ
* 2299 ಎಪಿಆರ್‌ಒ
* 6897 ಪೋಲಿಂಗ್ ಆಫೀಸರ್‌ಗಳು
* 427 ವಾಹನಗಳು

ಕೊನೆ ದಿನದ ಕಸರತ್ತು

ತಿಂಗಳ ಕಾಲ ಸಾಲು ಸಾಲು ಸಮಾವೇಶಗಳು, ರೋಡ್‌ ಷೋಗಳನ್ನು ನಡೆಸುವ ಮೂಲಕ ತುರುಸಿನ ಪ್ರಚಾರ ನಡೆಸಿದ ಅಭ್ಯರ್ಥಿಗಳು, ಪಕ್ಷಗಳ ಮುಖಂಡರು ಶುಕ್ರವಾರ ಮನೆಗಳಲ್ಲೇ ಉಳಿದರು. ಬಹಿರಂಗ ಪ್ರಚಾರದ ಕಾಲಾವಕಾಶ ಅಂತಿಮಗೊಂಡ ಕಾರಣ ತುಸು ವಿಶ್ರಾಂತಿ ಪಡೆದರು. ಮನೆಗಳು, ಕಚೇರಿಗಳಲ್ಲೇ ಕುಳಿತು ಕಾರ್ಯಕರ್ತರ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ನಡೆಸಿದರು.

ಬಿಜೆಪಿ ಅಭ್ಯರ್ಥಿಗಳು ‘ಕೀ ವೋಟರ್‌’ಗಳನ್ನು ಬಳಸಿಕೊಂಡು ಮತದಾರರನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ ಮತಯಾಚಿಸಿದರು. ಬೂತ್‌ ಮಟ್ಟದ ಕಾರ್ಯಕರ್ತರನ್ನು ಸಂಪರ್ಕಿಸಿ, ಅವರ ಮೂಲಕ ಮತದಾರರ ಮನಸೆಳೆಯುವ ಪ್ರಯತ್ನ ನಡೆಸಿದರು. ಕಾಂಗ್ರೆಸ್‌ ಮುಖಂಡರು ಕೂಡ ತಳಮಟ್ಟದ ಕಾರ್ಯಕರ್ತರ ಮೂಲಕ ಮತದಾರರ ಮನವೊಲಿಸುವ ಕೆಲಸ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT