ಗುಬ್ಬಿ: ಮೊಬೈಲ್ ಇಟ್ಟುಕೊಂಡಿದ್ದರು ಎಂಬ ಕಾರಣಕ್ಕೆ ಸರ್ಕಾರಿ ಬಸ್ ಚಾಲಕ ಮುರುಳಿಧರ್ ಮೇಲೆ ಅಧಿಕಾರಿಗಳು ಕ್ರಮ ಜರುಗಿಸುವುದನ್ನು ಬಸ್ನಲ್ಲಿದ್ದ ಪ್ರಯಾಣಿಕರು ತಡೆದರು. ಇದಕ್ಕಾಗಿ ಅವರು ಬಸ್ ನಿಲ್ಲಿಸಿ ಒಂದು ತಾಸು ಪ್ರತಿಭಟನೆ ನಡೆಸಿದರು.
ನಿಟ್ಟೂರು ಬಸ್ ನಿಲ್ದಾಣದಲ್ಲಿ ತಿಪಟೂರಿನಿಂದ ಬೆಂಗಳೂರು ಮಾರ್ಗವಾಗಿ ಆಗಮಿಸುತ್ತಿದ್ದ ಕೆ.ಎ.06.ಎಫ್.1152 ಬಸ್ನ ಪ್ರಯಾಣಿಕರ ಟಿಕೆಟ್ ತಪಾಸಣೆ ಮುಗಿಸಿದ ಬಳಿಕ, ಚಾಲಕರ ಬಳಿ ಮೊಬೈಲ್ ಇರುವುದನ್ನು ಪತ್ತೆ ಮಾಡಿದರು. ಚಾಲಕರ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದರು.
ಆಗ ಚಾಲಕ, ಪತ್ನಿ ಗರ್ಭಿಣಿಯಾಗಿದ್ದಾಳೆ. ತುರ್ತು ಕರೆಗಳು ಮನೆಯಿಂದ ಬರಬಹುದು ಎಂಬ ಕಾರಣಕ್ಕೆ ಮೊಬೈಲ್ ಇಟ್ಟುಕೊಂಡಿದ್ದೇನೆ ಎಂದು ಕೈ ಮುಗಿದು ಪ್ರಕರಣ ದಾಖಲಿಸದಂತೆ ಬೇಡಿದರು. ಇದಕ್ಕೆ ಅಧಿಕಾರಿಗಳು ಸ್ಪಂದಿಸದೆ ಅಧಿಕಾರಗಳು ಕ್ರಮಕ್ಕೆ ಷರಾ ಬರೆದರು.
ಇದನ್ನು ಕಂಡ ಪ್ರಯಾಣಿಕರು, ಚಾಲಕರ ವಿರುದ್ಧ ಕ್ರಮಕ್ಕೆ ಬರೆದ ಷರಾದ ಪ್ರತಿಯನ್ನು ಹರಿದುಹಾಕಿ ಎಂದು ಒಂದು ತಾಸು ಪಟ್ಟು ಹಿಡಿದರು. ಇದಕ್ಕೆ ಅಧಿಕಾರಿಗಳು ಮಣಿದರು.