ತುಮಕೂರು: ಲಾಕ್ಡೌನ್ನಿಂದಾಗಿ ಕೆಎಸ್ಆರ್ಟಿಸಿ ತುಮಕೂರು ವಿಭಾಗಕ್ಕೆ ಕಳೆದ ಒಂದುವರೆ ತಿಂಗಳಲ್ಲಿ ₹33 ಕೋಟಿ ನಷ್ಟ ಉಂಟಾಗಿದೆ.
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯದಲ್ಲಿ ಬಸ್ ಸಂಚಾರ ಬಂದ್ ಮಾಡಿರುವುದರಿಂದ ಆದಾಯಕ್ಕೆ ದೊಡ್ಡ ಮಟ್ಟದ ಪೆಟ್ಟು ನೀಡಿದೆ.
ರಾಜ್ಯದಲ್ಲಿ ಒಟ್ಟು 17 ವಿಭಾಗಗಳಿದ್ದು, ಪ್ರತಿ ದಿನ ಸರಾಸರಿ ₹89 ಕೋಟಿ ಆದಾಯ ಸಂಸ್ಥೆಗೆ ಹರಿದು ಬರುತ್ತಿತ್ತು. ತುಮಕೂರು ವಿಭಾಗ ಒಂದರಲ್ಲೇ ಪ್ರತಿದಿನ ₹65 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು.
ತುಮಕೂರು ವಿಭಾಗದಿಂದ ಒಟ್ಟು 620 ಬಸ್ಗಳು ಪ್ರತಿದಿನ ರಾಜ್ಯದ ವಿವಿಧೆಡೆ ಸಂಚರಿಸುತ್ತಿವೆ. 2,600 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ 1,800 ಮಂದಿ ಚಾಲಕರು, ನಿರ್ವಾಹಕರಿದ್ದಾರೆ. 800 ಮಂದಿ ತಾಂತ್ರಿಕ, ಆಡಳಿತ ಮತ್ತು ಇತರೆ ವಿಭಾಗಗಳ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಇದೇ ಮೊದಲು
ಕೆಎಸ್ಆರ್ಟಿಸಿ ಸಂಸ್ಥೆಯು ಇಷ್ಟೊಂದು ದಿನಗಳು ಬಸ್ ಸಂಚಾರ ನಿಲ್ಲಿಸಿದ ಉದಾಹರಣೆ ಇಲ್ಲ. ಚಾಲಕರು, ನಿರ್ವಾಹಕರಿಗೆ ರಜೆ ನೀಡಲಾಗಿತ್ತು. ತಾಂತ್ರಿಕ ಮತ್ತು ಆಡಳಿತ ಸಿಬ್ಬಂದಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ.
ಆರಂಭದಲ್ಲೇ ನಷ್ಟ
ಲಾಕ್ಡೌನ್ ಮಾರ್ಚ್ 25ರಿಂದ ಘೋಷಣೆಯಾಗಿದ್ದರೂ ತುಮಕೂರು ವಿಭಾಗದಲ್ಲಿ ಮಾರ್ಚ್ 14ರಿಂದಲೇ 620 ಬಸ್ಗಳ ಪೈಕಿ 130 ಬಸ್ಗಳ ಸಂಚಾರ ನಿಲ್ಲಿಸಲಾಗಿತ್ತು. ಆ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಪರಿಣಾಮ ಕೇವಲ 5 ದಿನಗಳಲ್ಲಿ (ಮಾರ್ಚ್ 15ರಿಂದ 19) ₹38.82 ಲಕ್ಷ ನಷ್ಟ ಉಂಟಾಗಿತ್ತು.