ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶವಾಗಿರುವ ಕಾರಣ ಈ ಭಾಗದ ರೈತರು ಪ್ರತಿವರ್ಷ ಮುಂಗಾರಿನಲ್ಲಿ ಬೀಳುವ ಮಳೆಗೆ ಭೂಮಿ ಸ್ವಚ್ಛಗೊಳಿಸಿ, ಮೆಕ್ಕೆಜೋಳ, ರಾಗಿ, ಶೇಂಗಾ, ಅವರೆ, ಅಲಸಂದಿ, ತೊಗರಿ ಮತ್ತು ಹಲವು ಸಿರಿಧಾನ್ಯಗಳನ್ನು ಬಿತ್ತನೆ ಮಾಡುತ್ತಾರೆ. ಐದಾರು ವರ್ಷಗಳಿಂದ ಈ ಭಾಗದಲ್ಲಿ ಸರಿಯಾದ ಮಳೆ-ಬೆಳೆಯಿಲ್ಲದೆ ಜನರು ಕಂಗಾಲಾಗುವುದರ ಜೊತೆಗೆ ಕುಡಿಯುವ ನೀರಿಗೂ ಪರದಾಡಿದ್ದರು. ಆದರೆ ಹಿಂದಿನ ವರ್ಷ ಉತ್ತಮ ಮಳೆ ಬಿದ್ದಿದ್ದರಿಂದ ಬೆಳೆ ಜೊತೆಗೆ ಜಾನುವಾರಗಳಿಗೆ ಮೇವು ಸಿಕ್ಕಿದ್ದರಿಂದ ರೈತರು ಸಮಾಧಾನಪಟ್ಟಿದ್ದರು.