ತುಮಕೂರು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ ಭಾನುವಾರ ಗಾಂಧಿ ನಗರದ ಬಾಲಕರ ಸರ್ಕಾರಿ ಬಾಲಮಂದಿರ ಹಾಗೂ ಅಮರ ಜ್ಯೋತಿ ನಗರದ ಬಾಲಕಿಯರ ಸರ್ಕಾರಿ ಬಾಲ ಮಂದಿರಕ್ಕೆ ಭೇಟಿ ನೀಡಿ ಕೊರೊನಾ ಸೋಂಕು ತಡೆಗೆ ಮಕ್ಕಳಿಗೆ ಒದಗಿಸಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಮಕ್ಕಳ ಆರೋಗ್ಯ ವಿಚಾರಿಸಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ 2 ಗಂಟೆಗೆ ಒಮ್ಮೆ ಕೈಗಳನ್ನು ತೊಳೆಯಬೇಕು ಎಂದು ಸಲಹೆ ನೀಡಿದರು. ಕಾಲಕಾಲಕ್ಕೆ ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್, ಬಾಲಮಂದಿರದಲ್ಲಿ 7 ಬಾಲಕರು ಹಾಗೂ 21 ಬಾಲಕಿಯರು ಇದ್ದಾರೆ. ಎಲ್ಲ ಮಕ್ಕಳಿಗೆ ಕರವಸ್ತ್ರ ಮತ್ತು ಟವಲ್ಗಳನ್ನು ಒದಗಿಸಲಾಗಿದೆ. ಸ್ಯಾನಿಟೈಸರ್ ಬಳಸುವ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.