ತುಮಕೂರು: ಜಾರಿ ನಿರ್ದೇಶನಾಲಯ (ಇ.ಡಿ) ಬಳಿ ಏನು ಮಾಹಿತಿ, ದಾಖಲೆಗಳಿವೆಯೊ ಗೊತ್ತಿಲ್ಲ. ಎಲ್ಲರಿಗೂ ಆಗುವ ಕಾನೂನೇ ಡಿ.ಕೆ.ಶಿವಕುಮಾರ್ ಅವರಿಗೂ ಅನ್ವಯವಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸುತ್ತಿದೆ ಎಂಬುದು ಸುಳ್ಳು. ಕಾಂಗ್ರೆಸ್ ಪಕ್ಷದಲ್ಲಿ ಬಹಳ ಜನರು ಇದ್ದಾರೆ. ಎಲ್ಲರ ಮೇಲೂ ದಾಳಿ ಮಾಡಲಾಗಿದೆಯೇ? ಎಂದರು.
ಪಿ.ಚಿದಂಬರಂ ಅವರದ್ದು ಮೂರು ವರ್ಷಗಳಷ್ಟು ಹಳೆಯ ಪ್ರಕರಣ. ಜಾಮೀನು ತೆಗೆದುಕೊಳ್ಳಬಹುದಿತ್ತು. ಚಿದಂಬರಂ ಅಂಥವರೇ ತಲೆಮರೆಸಿಕೊಂಡರೆ ಜಾರಿ ನಿರ್ದೇಶನಾಲಯ, ಆಡಳಿತ ಯಂತ್ರ ಏನು ಮಾಡಲು ಸಾಧ್ಯ ಎಂದು ಹೇಳಿದರು.
ಖಾತೆ ಕಾಯ್ದಿರಿಸಿದೆ: ಮುಖ್ಯಮಂತ್ರಿ ಅವರ ಬಳಿ ಖಾತೆಗಳಿವೆ. ಮುಂದೆ ಬರುವವರಿಗೆ ಕೆಲ ಖಾತೆಗಳನ್ನು ಕೊಡಬೇಕಾಗುತ್ತದೆ. ಅವರಿಗಾಗಿ ಕಾಯ್ದಿರಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.