ತುಮಕೂರು: ಸ್ವಚ್ಛತಾ ಕಾರ್ಯಕ್ರಮವು ಪ್ರತಿಯೊಬ್ಬರ ಮನೆಯಿಂದಲೇ ಆರಂಭಗೊಂಡಾಗ ಮಾತ್ರ ನಗರ ಸ್ವಚ್ಛವಾಗಿರುತ್ತದೆ ಎಂದು ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ತಿಳಿಸಿದರು.
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಮಹಾನಗರ ಪಾಲಿಕೆ ಮೈಸೂರಿನ ಭಗೀರಥ ಸಂಸ್ಥೆಯು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದ ಅಂಗವಾಗಿ ನಗರದ ಅರಳಿಮರದ ಪಾಳ್ಯದಲ್ಲಿ ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಜನರು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಕಸ, ಒಣ ಕಸವಾಗಿ ವಿಂಗಡಿಸಿ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು. ಮೊದಲು ನಮ್ಮ ಮನೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ನಗರವನ್ನು ಸ್ವಚ್ಛವಾಗಿಡುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಭಗೀರಥ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂಗಪ್ಪ ಮಾತನಾಡಿದರು. ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಪರ್ಕಾಧಿಕಾರಿ ಪಿ.ವರಪ್ರಸಾದ್ರಾವ್, ಕಾರ್ಯಕ್ರಮ ಸಂಯೋಜಕ ಹಡವನಹಳ್ಳಿ ವೀರಣ್ಣಗೌಡ, ಪಾಲಿಕೆ ಪರಿಸರ ಸಂಯೋಜಕ ಮೃತ್ಯುಂಜಯ, ಆರೋಗ್ಯಾಧಿಕಾರಿ ಪ್ರಸನ್ನ ಕುಮಾರ್, ಕಾಳಪ್ಪ ಸೊಸೊನೆ ಇದ್ದರು.
ಡಮರುಗ ಉಮೇಶ್ ಮತ್ತು ತಂಡದವರು ಸ್ವಚ್ಛತೆ ಕುರಿತ ಜಾಗೃತಿಯನ್ನು ಬೀದಿ ನಾಟಕದ ಮೂಲಕ ಪ್ರದರ್ಶಿಸಿದರು.