ಶಿರಾ: ‘ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಜೈಲಿಗೆ ಹೋಗುವ ಪ್ರಸಂಗ ಬಂದರೆ ಮೊದಲು ಜೈಲಿಗೆ ಹೋಗುವುದು ನಾನೇ’ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಮದಲೂರು ಕೆರೆಗೆ ನೀರು ಹರಿಸಿದರೆ ಜೈಲಿಗೆ ಹೋಗಬೇಕು ಎಂದು ಯಾವ ಆರ್ಥದಲ್ಲಿ ಹೇಳಿದರೊ ಅದು ನನಗೆ ತಿಳಿದಿಲ್ಲ. ಆದರೆ ಜನತೆಯ ಹಿತಕಾಯುವ ದೃಷ್ಟಿಯಲ್ಲಿ ಯಾವುದೇ ರೀತಿಯ ರಾಜಿಯ ಪ್ರಶ್ನೆ ಇಲ್ಲ’ ಎಂದರು.
ಮಧುಸ್ವಾಮಿ ಅವರು ಪಕ್ಷದ ಹಿರಿಯ ಮುಖಂಡರು, ಉತ್ತಮ ಸಂಸದೀಯ ಪಟು, ಅನುಭವಶಾಲಿಗಳು ಅವರಬಗ್ಗೆ ಅಪಾರ ಗೌರವವಿದೆ. ಆದರೆ ಹೇಮಾವತಿ ಜಲಾಶಯ ಭರ್ತಿಯಾಗುತ್ತಿರುವ ಸಮಯದಲ್ಲಿ ಇಂತಹ ಹೇಳಿಕೆ ನೀಡುವ ಅವಶ್ಯಕತೆ ಏನಿತ್ತು ಎನ್ನುವುದು ಆರ್ಥವಾಗುತ್ತಿಲ್ಲ ಎಂದರು.
ಶಿರಾ ಉಪಚುನಾವಣೆ ಸಮಯದಲ್ಲಿ ಮದಲೂರು ಕೆರೆ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಕಳೆದ ವರ್ಷ ನೀರು ಹರಿಸಲಾಯಿತು. ಈ ಬಾರಿ ಹರಿಸುವುದಿಲ್ಲ ಎಂದರೆ ಏನು ಅರ್ಥ.ನಾವು ನೀರಾವರಿಗೆ ನೀರು ಕೇಳುತ್ತಿಲ್ಲ. ಅಂತರ್ಜಲ ವೃದ್ಧಿಗಾಗಿ ಕೇಳುತ್ತಿದ್ದೇವೆ. ಪ್ಲೋರೈಡ್ನಿಂದ ಕುಡಿಯಲು ನೀರಿಲ್ಲದೆ ಜನರು ಸಂಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಅವರಿಗೆ ಪರಿಸ್ಥಿತಿಯನ್ನು ಮನದಟ್ಟು ಮಾಡಿ ನೀರು ಹರಿಸುವ ಕೆಲಸ ಮಾಡಲಾಗುವುದು ಎಂದರು.
ಮದಲೂರು ಶಿರಾ ತಾಲ್ಲೂಕಿನ ಒಂದು ಭಾಗ ಅದು ಪಾಕಿಸ್ತಾನದಲ್ಲಿ ಇಲ್ಲ. ಅಲ್ಲಿಗೆ ನೀರು ಹರಿಸಲು ಏಕೆ ಅಡ್ಡಿ ಮಾಡಲಾಗುತ್ತಿದೆ. ಮಾನವೀಯ ದೃಷ್ಟಿಯಿಂದ ನೀರು ಹರಿಸುವಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಲ್ಲಿ ಮನವಿ ಮಾಡಲಾಗುವುದು ಎಂದರು.