ತುಮಕೂರು: ಗರ್ಭಿಣಿಯರು ಇರುವ ಮನೆಯಲ್ಲಿ ಸಂತಸದ ವಾತಾವರಣ ಇರಬೇಕು. ಸುತ್ತಮುತ್ತಲೂ ನೈರ್ಮಲ್ಯ ವಾತಾವರಣ ಬಹುಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್ನಿಂದ ಅವರು ದೂರವಿರಬೇಕು ಎಂದು ಚಿನ್ಮಯ ಮಿಷನ್ ಸಂಚಾಲಕಿ ಗೀತಾ ನಾಗರಾಜು ಹೇಳಿದರು.
ನಗರದ ನಿವೇದಿತಾ ಪ್ರತಿಷ್ಠಾನವು ಮಾರುತಿನಗರದ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಆಯೋಜಿಸಿದ್ಧ ಗರ್ಭಸಂಸ್ಕಾರ ಮತ್ತು ಸೀತಾನವಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗರ್ಭಿಣಿಯು ತನ್ನ ಒಡಲಲ್ಲಿರುವ ಮಗುವಿನ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಸರಳವಾದ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಬೇಕು. ಸದಾ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳುವುದು, ಸಂಗೀತ ಆಲಿಸುವುದು ಮಗುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ವಿವರಿಸಿದರು.
ತಾಯಿ ಮಲಗಿದ್ದಾಗ ಒಡಲಲ್ಲಿರುವ ಮಗು ಎಚ್ಚರವಾಗಿರುತ್ತದೆ. ಗರ್ಭಿಣಿಯಲ್ಲಾಗುವ ಸಂತೋಷ, ದುಃಖ, ಕೋಪ, ಉದ್ವೇಗ, ಮತ್ತಿತರ ಬದಲಾವಣೆಗಳು ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಪ್ರತಿ ಕ್ಷಣವನ್ನು ಒತ್ತಡವಿಲ್ಲದೇ ಸಂತೋಷದಿಂದ ಇರಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ಡಾ.ಸುದರ್ಶನ್ ಅವರು ಗರ್ಭಿಣಿಯರು ಸೇವಿಸಬಹುದಾದ ಆಹಾರದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಉಡಿ ತುಂಬಲಾಯಿತು.
ಉಪನ್ಯಾಸಕಿ ರಾಧಿಕಾ, ನಿವೇದಿತಾ ಪ್ರತಿಷ್ಠಾನದ ಮುಕ್ತ, ಇಂದುಮತಿ, ಶಶಿಕಲಾ ಇದ್ದಾರೆ.