ತುರುವೇಕೆರೆ: ಯುವ ಕವಿಗಳು ಶಿಷ್ಟ ಸಾಹಿತ್ಯದ ಜೊತೆಗೆ ನೆಲ ಮೂಲ ಪರಂಪರೆಯಾದ ಜನಪದ ಸೊಗಡನ್ನಿಟ್ಟುಕೊಂಡು ಕಾವ್ಯವನ್ನು ಹೆಚ್ಚು ಬರೆಯಬೇಕು ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಕವಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ನಡೆದ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಕವಿಗಳು ಹೆಚ್ಚು ಅಧ್ಯಯನಶೀಲರಾಗಿ ತಮ್ಮ ಅನುಭವಗಳೊಂದಿಗೆ ಕಾವ್ಯ ಬರೆದರೆ ಆ ಕಾವ್ಯದ ಸಾರ್ಥಕತೆ ಹೆಚ್ಚಾಗುತ್ತದೆ. ಕಾವ್ಯದ ಎಲ್ಲ ಪ್ರಕಾರಗಳಲ್ಲಿಯೂ ಕವಿಗಳು ಕೃಷಿ ಮಾಡಿದರೆ ಕನ್ನಡ ಸಾಹಿತ್ಯದ ಸಂಪತ್ತು ಮತ್ತಷ್ಟು ಸಂಮೃದ್ಧವಾಗಿ ಬೆಳೆಯಲಿದೆ ಎಂದರು.
ಕವಿ ಪಾಂಡುರಂಗಯ್ಯ ಎ.ಹೊಸಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಕನ್ನಡ ಕಾವ್ಯ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ. ಯಾವುದೇ ಕಾವ್ಯ ನೋವು, ದುಃಖ, ಶೋಷಣೆ, ಅನ್ಯಾಯ ಮೊದಲಾದ ಸಂಕಟಗಳನ್ನು ತನ್ನ ಒಡಲಲ್ಲಿ ಧರಿಸಿಕೊಂಡೇ ರಚನೆಯಾಗುತ್ತದೆ ಎಂದರು.
ಇದೇ ವೇಳೆ ಸುಮಾರು 15ಕ್ಕೂ ಹೆಚ್ಚುಕವಿಗಳು ಕವಿತೆ ವಾಚನ ಮಾಡಿದರು.