ತುಮಕೂರು: ಸಮಾಜದ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ‘ಹೊಸಬೆಳಕು ಹೊಸಬದುಕು’ ಹಾಗೂ ‘ಭೂಮಿ’ ಬಳಗದಿಂದ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರಿಗೆ ಸ್ಫೂರ್ತಿ ತುಂಬಬೇಕು ಎಂದರು.
ಕೈಗಾರಿಕೆ, ಪತ್ರಿಕೋದ್ಯಮ ಮತ್ತು ಬ್ಯಾಂಕ್ ಕ್ಷೇತ್ರಗಳಲ್ಲಿ ಇಂದು ಕುಸಿತ ಕಾಣುತ್ತಿದೆ. ಸಣ್ಣ ಮತ್ತು ಮಧ್ಯಮದ ಕೈಗಾರಿಕೆಗಳು ಮುಚ್ಚುತ್ತಿವೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ದೇಶದಲ್ಲಿಯೇ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರವಾಗಿದೆ. ಇದು ಹೆಮ್ಮೆಯ ಸಂಗತಿ. ಯುವ ಸಮುದಾಯಕ್ಕೆ ಕೈಗಾರಿಕಾ ಕ್ಷೇತ್ರದಲ್ಲಿ ಅವಕಾಶ ನೀಡಬೇಕು. ಬ್ಯಾಂಕುಗಳಲ್ಲಿ ಹೆಚ್ಚು ಸಾಲ ಸೌಲಭ್ಯ ಒದಗಿಸಬೇಕು. ಪತ್ರಿಕೋದ್ಯಮವು ವಾಸ್ತವವನ್ನು ಬರೆಯಬೇಕು ಎಂದರು.
ರಾಜಕಾರಣಿಗಳು ಸಮಾಜದಲ್ಲಿ ಬರುವ ಟೀಕೆಗಳನ್ನು ಅರ್ಥಮಾಡಿಕೊಳ್ಳಬೇಕು. ಸದೃಢ ಪ್ರಜಾಪ್ರಭುತ್ವ ಮಹತ್ವವನ್ನು ಅರಿಯಬೇಕು ಎಂದು ನುಡಿದರು.