ಹುಳಿಯಾರು: ಪಟ್ಟಣ ಸಮೀಪದ ಲಿಂಗಪ್ಪನಪಾಳ್ಯದ ರಾಮ ದೇಗುಲದಲ್ಲಿ ಗುರುವಾರ ಶ್ರೀರಾಮ ನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಗ್ರಾಮದಲ್ಲಿ ಯುಗಾದಿ ಹಬ್ಬಕ್ಕಿಂತಲೂ ವಿಶೇಷವಾಗಿ ರಾಮ ನವಮಿ ಹಬ್ಬ ಆಚರಿಸುವುದು ವಿಶೇಷ. ಯುಗಾದಿ ತರುವಾಯ ಒಂಬತ್ತು ದಿನಗಳ ಕಾಲ ದೇಗುಲದಲ್ಲಿ ವಿಶೇಷ ಪೂಜೆ, ರಾಮ ಭಜನೆ ಮಾಡುತ್ತಾರೆ. ಯುಗಾದಿ ನಂತರ ಒಂದು ತಿಂಗಳ ಕಾಲ ಗ್ರಾಮದಲ್ಲಿ ಮಾಂಸಾಹಾರ ನಿಷಿದ್ಧಗೊಳಿಸಲಾಗುತ್ತದೆ.
ಹಬ್ಬದ ಅಂಗವಾಗಿ ಮುಂಜಾನೆ ಪಟ್ಟಣದ ಗ್ರಾಮ ದೇವತೆಗಳಾದ ದುರ್ಗಾ ಪರಮೇಶ್ವರಿ, ಹುಳಿಯಾರಮ್ಮ ಹಾಗೂ ಆಂಜನೇಯ ಸ್ವಾಮಿ ದೇವರನ್ನು ಗ್ರಾಮಕ್ಕೆ ಕರೆ ತರುತ್ತಾರೆ. ದೇಗುಲದಲ್ಲಿರುವ ಶ್ರೀರಾಮ ಸೇರಿದಂತೆ ಲಕ್ಷಣ, ಸೀತೆ ಹಾಗೂ ಆಂಜನೇಯ ಸ್ವಾಮಿಗೆ ಅಭಿಷೇಕ, ಅಲಂಕಾರ ಮಾಡಲಾಗಿತ್ತು.
ರಾಮನ ಮೂರ್ತಿ ಸೇರಿದಂತೆ ಇತರೆ ದೇವತೆಗಳ ಉತ್ಸವ ಗ್ರಾಮದಲ್ಲಿ ನಡೆಯಿತು. ಸಂಜೆ ಮಹಾಮಂಗಳಾರತಿ ನಡೆದು ನೂರೊಂದೆಡೆ ಸೇವೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ರಾಮ ನವಮಿ ಆಚರಿದರು.