ತುಮಕೂರು: ಕನಕದಾಸರ ಚಿಂತನೆಗಳನ್ನು ಅಳವಡಿಸಿಕೊಂಡರೆ ಮನುಷ್ಯ ತನ್ನ ದೋಷಗಳನ್ನು ತಿದ್ದುಕೊಂಡು ಸಾರ್ಥಕ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಾಗವಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೈ.ಎನ್.ನಾಗರಾಜಪ್ಪ ತಿಳಿಸಿದರು.
ಕಾಲೇಜಿನಲ್ಲಿ ಶಿವಕುಮಾರ ಸ್ವಾಮೀಜಿ ರೋವರ್ ಸ್ಕೌಟ್ ಹಾಗೂ ರಾಷ್ಟ್ರೀಯ ಸೇವಾ ಘಟಕದಿಂದ ಆಯೋಜಿಸಿದ್ದ ಕನಕದಾಸರ ಜಯಂತಿಯಲ್ಲಿ ಲಿ ಕನಕದಾಸರ ವಿಚಾರಧಾರೆಗಳ ಕುರಿತು ಮಾತನಾಡಿದರು.
‘ಮೋಹನ ತರಂಗಿಣಿ’, ‘ಹರಿಭಕ್ತಿ ಸಾರ’, ‘ರಾಮಧಾನ್ಯ ಚರಿತೆ’ ಕೃತಿಗಳ ರಚನೆಯಿಂದ ಹಾಗೂ ಸನ್ಮಾರ್ಗವ ತೋರುವ ಅನೇಕ ಗೀತೆಗಳಿಂದ ಕನಕದಾಸರು ಜಗತ್ತಿಗೆ ಮಹತ್ತರವಾದ ಸಂದೇಶವನ್ನು ನೀಡಿದ್ದಾರೆ ಎಂದರು.
ಪ್ರಾಂಶುಪಾಲರಾದ ಸುಜಾತ ಎಸ್.ಜಂಬಗಿ, ’ವಿದ್ಯಾರ್ಥಿಗಳು ಕನಕದಾಸರ ಮೌಲ್ಯಗಳನ್ನು ಅರಿತು ನಡೆದರೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬಹುದು’ ಎಂದು ಹೇಳಿದರು.
ಕನಕದಾಸರ ’ಈಶ ನಿನ್ನ ಚರಣ ಭಜನೆ ಆಸೆಯಿಂದ ಮಾಡುವೆನು ದೋಷರಾಶಿ ನಾಶ ಮಾಡು ಶ್ರೀಶ ಕೇಶವ’ ಎಂಬ ಗೀತೆಯನ್ನು ರೋವರ್ ಸ್ಕೌಟ್ ಲೀಡರ್ ಎಂ.ಸುರೇಶ ನೇತೃತ್ವದಲ್ಲಿ ಸಾಮೂಹಿಕವಾಗಿ ಹಾಡಿದರು.
ವಿದ್ಯಾರ್ಥಿನಿಯರಾದ ಅಂಜು, ಜ್ಯೋತಿ, ಜಿ.ಶಿಲ್ಪಾ, ಎ.ಆರ್.ವನಿತಾ, ಉಪನ್ಯಾಸಕ ಎಚ್.ಸಿ.ಪ್ರಾಣೇಶ್ ರಾವ್ ಇದ್ದರು.