ತುಮಕೂರು: ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತುಮಕೂರು ತಾಲ್ಲೂಕಿನ ತಮ್ಮಡಿಹಳ್ಳಿ ಬೆಟ್ಟದಲ್ಲಿ ಹೊಂಡಗಳ ನಿರ್ಮಾಣ(ಜೋಹಾಡ್) ಕುರಿತಂತೆ 35 ಯುವಕರ ‘ಜೀವನಾಡಿ’ ತಂಡವು ಈಚೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುಪ್ಪೂರು ವಿರಕ್ತಮಠದಲ್ಲಿ ಪೂರ್ವ ಭಾವಿ ಸಭೆ ನಡೆಸಿತು.
ದಶಕಗಳಿಂದ ಪರಿಸರದಲ್ಲಿ ವೈಫರಿತ್ಯ ಆಗಿದೆ. ಇದಕ್ಕೆ ತುಮಕೂರು ಜಿಲ್ಲೆಯೇನು ಹೊರತಲ್ಲ. ಶುದ್ಧ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಬಿಸಿಲ ತಾಪ ಏರುಗತಿಯಲ್ಲಿದ್ದು, ಅರಣ್ಯ ವಲಯಗಳು ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಈ ಜಿಲ್ಲೆಯ ಯುವಜನರು ಒಗ್ಗೂಡಬೇಕು ಎಂದು ಸಭೆಯು ಅಭಿಪ್ರಾಯಪಟ್ಟಿತು.
ಬಳಿಕ ತಮ್ಮಡಿಹಳ್ಳಿಯಲ್ಲಿ ಬೆಟ್ಟದಲ್ಲಿ ಜೀವನಾಡಿ ತಂಡದ ಯುವಕರ ಪಡೆಯು ಹೊಂಡಗಳನ್ನು ನಿರ್ಮಿಸುವ ಮೂಲಕ ಜಲಸಂರಕ್ಷಣೆ ಕಾರ್ಯಕ್ಕೆ ಚಾಲನೆ ನೀಡಿತು. ಬೆಟ್ಟದ ಮೇಲೆ ಬಿದ್ದ ಮಳೆ ನೀರು ಭೂಮಿಗೆ ಇಂಗಲು ಗಿಡಗಳನ್ನು ನೆಡಲು ತೀರ್ಮಾನ ಮಾಡಿತು.
ಸಹಜ ಬೇಸಾಯ ಶಾಲೆಯ ಹಿರಿಯ ಪರಿಸರ ತಜ್ಞ ಸಿ.ಯತಿರಾಜು, ಡಾ.ಮಂಜುನಾಥ್, ಶಿಕ್ಷಕರಾದ ರಾಮಕೃಷ್ಣಪ್ಪ, ಇಂದಿರಮ್ಮ ಸೇರಿದಂತೆ ಅನೇಕ ಹಿರಿಯರು ಮಾರ್ಗದರ್ಶಕರಾಗಿದ್ದರು.