ತುಮಕೂರು: ದೇಶ ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಯುವ ಸಮೂಹ ಬಡವರ ಪರ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಬೀರೇಶ್ವರ ಕನ್ವೆಷನ್ ಹಾಲ್ನಲ್ಲಿ ಆರ್.ಆರ್.ಅಭಿಮಾನಿ ಬಳಗವು ಹಮ್ಮಿಕೊಂಡಿರುವ ಆಹಾರ ವಿತರಣಾ ಕಾರ್ಯ ವೀಕ್ಷಿಸಿ ಮಾತನಾಡಿದರು.
ಸಂಕಷ್ಟದ ಸಮಯದಲ್ಲಿ ಮಾನವೀಯತೆ ತೋರುವುದು ಅವಶ್ಯ. ಗುಣಮಟ್ಟದ ಊಟವನ್ನು ಇಲ್ಲಿಂದ ನೀಡಲಾಗುತ್ತಿದೆ ಎಂದರು.
ಆರ್.ಆರ್.ಬಳಗ ಹಾಗೂ ಯುವ ಕಾಂಗ್ರೆಸ್ ಮಾ.26ರಿಂದ ಆರಂಭಿಸಿರುವ ದಾಸೋಹ ಕಾರ್ಯಕ್ಕೆ ಸಿದ್ಧಗಂಗಾ ಮಠವೇ ಪ್ರೇರಣೆಯಾಗಿದೆ. ದಾಸೋಹ ಪ್ರಾರಂಭಕ್ಕೆ ಮಠದಿಂದ ಅಕ್ಕಿ ಕಳುಹಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ದಾಸೋಹ ನಡೆಯುತ್ತಿದೆ ಎಂದು ಯುವಕಾಂಗ್ರೆಸ್ ಮುಖಂಡ ಆರ್.ರಾಜೇಂದ್ರ ತಿಳಿಸಿದರು.