ತುಮಕೂರು: ಶಿವಕುಮಾರ ಸ್ವಾಮೀಜಿ ದರ್ಶನಕ್ಕೆ ಬರುವ 5 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ನಗರದ ಅಕ್ಕಿ ಗಿರಣಿ ಮಾಲೀಕರ ಸಂಘ ಸೇರಿದಂತೆ ವಿವಿಧ ವ್ಯಾಪಾರಸ್ಥರು ಸಂಘಟನೆಗಳು ಜಂಟಿಯಾಗಿ ವ್ಯವಸ್ಥೆ ಮಾಡಿದ್ದು, ತುಮಕೂರು ನಗರ ಮತ್ತು ಕ್ಯಾತ್ಸಂದ್ರದಲ್ಲಿ 60ಕ್ಕೂ ಹೆಚ್ಚು ಕೌಂಟರ್ ತೆರೆದಿದ್ದಾರೆ.
ನಗರದ ಬಸವೇಶ್ವರ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ ಸಂಜೆಯಿಂದಲೇ ಅಡುಗೆ ಸಿದ್ಧತೆ ಪ್ರಾರಂಭಿಸಿ ಬಳಿಕ ನಗರದ ವಿವಿಧ ಕಡೆ, ಮಠದ ಆವರಣಕ್ಕೆ, ಕ್ಯಾತ್ಸಂದಕ್ಕೆ ಟಾಂ ಟಾಂಗಳಲ್ಲಿ ಪ್ರಸಾದದ ಪೊಟ್ಟಣಗಳನ್ನು ಸ್ವಯಂ ಸೇವಕರು ಪೂರೈಸಿದ್ದಾರೆ.
ಮಂಗಳವಾರ ಮಧ್ಯಾಹ್ನದವರೆಗೂ ಇದೇ ರೀತಿ ಪ್ರಸಾದ ವ್ಯವಸ್ಥೆ ಇರಲಿದೆ. ಬೇರೆ ಊರುಗಳಿಂದ ಬರುವ ಭಕ್ತರು ಹಾಗೂ ನಗರದ 3 ಲಕ್ಷ ಜನರೂ ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಭಕ್ತರು ಬಂದರೂ ಅವರಿಗೆ ಯಾವುದೇ ಕೊರತೆ ಆಗದ ರೀತಿ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪ್ರಸಾದ ವ್ಯವಸ್ಥೆ ನೇತೃತ್ವವಹಿಸಿರುವ ಮಾಜಿ ಶಾಸಕ ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
ಪಲಾವ್, ಉಪ್ಪಿಟ್ಟು, ಮೊಸರನ್ನ, ಚಿತ್ರಾನ್ನ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಿದ್ದು, ಸ್ವಯಂ ಸೇವಕರು ಟಾಂ ಟಾಂಗಳಲ್ಲಿ ನಗರದ ವಿವಿಧ ಕಡೆ, ಮಠದ ಕಡೆ, ಕ್ಯಾತ್ಸಂದ್ರದಲ್ಲಿರುವ ಕೌಂಟರ್ಗಳಲ್ಲಿ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.
ಎರಡು ಸಾವಿರಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಸ್ವಯಂ ಸೇವಕರು ಅಡುಗೆ ಸಿದ್ಧತೆ, ಪ್ರಸಾದ ವ್ಯವಸ್ಥೆ, ದಿನಸಿ ಬೇರ್ಪಡಿಕೆ ಕಾರ್ಯದಲ್ಲಿ ತೊಡಗಿದ್ದಾರೆ. 400 ಕ್ವಿಂಟಲ್ ಅಕ್ಕಿಯನ್ನು ಭಕ್ತರು ಪೂರೈಸಿದ್ದು, 1 ಲೋಡ್ ದಿನಸಿ ಬಂದಿದೆ. ಸ್ವಯಂ ಪ್ರೇರಿತರಾಗಿ ಜನರು ಪ್ರಸಾದ ವ್ಯವಸ್ಥೆಗೆ ದಿನಸಿ ಪದಾರ್ಥ ತಂದು ಕೊಡುತ್ತಿದ್ದಾರೆ.