ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಎಸ್ಬಿಐ ಬ್ಯಾಂಕ್ ಶಾಖೆಯ ಸಹಾಯಕ ಸಿಬ್ಬಂದಿಯೊಬ್ಬ ಗ್ರಾಹಕರಿಗೆ ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಲಕ್ಷಾಂತರ ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾನೆ.
ತಾಲ್ಲೂಕಿನ ಹೊಳವನಹಳ್ಳಿ ಬ್ಯಾಂಕಿನ ಸಹಾಯಕ ಚಂದ್ರಶೇಖರ ವಂಚನೆ ಮಾಡಿರುವ ವ್ಯಕ್ತಿ. ಪ್ರಕರಣ ಬೆಳಕಿಗೆ ಬಂದ ಕಾರಣ ಕಳೆದ ನಾಲ್ಕೈದು ದಿನಗಳಿಂದ ತಲೆ ಮರೆಸಿಕೊಂಡಿದ್ದಾನೆ.
ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ತಿಳಿಯದಂತೆ ಅವರ ಖಾತೆಯಿಂದ ಲಕ್ಷಾಂತರ ರೂಪಾಯಿಗಳನ್ನು ತನ್ನ ಹಾಗೂ ಸ್ನೇಹಿತನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ತಾಲ್ಲೂಕಿನ ಹೊಳವನಹಳ್ಳಿ ಎಸ್ಬಿಐ ಶಾಖೆಯಲ್ಲಿ 80ಕ್ಕೂ ಹೆಚ್ಚು ಗ್ರಾಮದ ರೈತರು, ವೃದ್ಧರು, ಮಹಿಳೆಯರು 14 ಸಾವಿರಕ್ಕೂ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆದು ವಹಿವಾಟು ನಡೆಸುತ್ತಿದ್ದಾರೆ.
ಈಚೆಗೆ, ಹೊಳವನಹಳ್ಳಿ ಹೋಬಳಿ ಕಳ್ಳಿಪಾಳ್ಯ ಗ್ರಾಮದ ರೈತ ಗರುಡಪ್ಪನ ಖಾತೆಯಿಂದ ಚಂದ್ರಶೇಖರ್ ಖಾತೆಗೆ ಎರಡು ಬಾರಿ ₹ 70 ಸಾವಿರ ಹಾಗೂ ತನ್ನ ಸ್ನೇಹಿತರ ಎರಡು ಖಾತೆಗಳಿಗೆ ₹ 56 ಸಾವಿರ ವರ್ಗಾವಣೆಯಾಗಿದೆ.
ಅದೇ ರೀತಿ ದುಗ್ಗೇನಹಳ್ಳಿ ಗ್ರಾಮದ ಸಿದ್ದಪ್ಪನ ಖಾತೆಯಿಂದ ₹ 20 ಸಾವಿರ, ಹೊಳವನಹಳ್ಳಿ ಗ್ರಾಮದ ಮಲ್ಲಮ್ಮನ ಖಾತೆಯಿಂದ ಎರಡು ಬಾರಿ ತಲಾ ₹ 10 ಸಾವಿರದಂತೆ ₹ 20 ಸಾವಿರ ಚಂದ್ರಶೇಖರ್ ಖಾತೆಗೆ ವರ್ಗಾವಣೆಯಾಗಿದೆ.
ಸುಮಾರು 13 ವರ್ಷದಿಂದ ಸಾವಿರಾರು ಗ್ರಾಹಕರಿಗೆ ಗೊತ್ತಾಗದಂತೆ ಹಣ ಡ್ರಾ ಮಾಡಿದ್ದಾನೆ. ವಂಚನೆಗೊಳಗಾದ ರೈತರು ತಮ್ಮ ಹಣ ಕಳೆದುಕೊಂಡು ಈಗ ಬ್ಯಾಂಕಿಗೆ ಅಲೆಯುವಂತಾಗಿದೆ.