ತುಮಕೂರು: ಹೇಮಾವತಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಜಿಲ್ಲೆಯ ಹೇಮಾವತಿ ನಾಲಾ ವಲಯ ವ್ಯಾಪ್ತಿಗೆ ನೀರು ಹರಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ತುಮಕೂರು ನಗರದ ಕುಡಿಯುವ ನೀರಿನ ಜಲ ಸಂಗ್ರಹವಾದ ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ಬರಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.
ಶುಕ್ರವಾರ ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ಬರುವ ಕಾಲುವೆಯ ದುರಸ್ತಿ ಕಾಮಗಾರಿಗಳ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.
ಗೊರೂರು ಜಲಾಶಯದಲ್ಲಿ ಇಂದಿನ ಒಳ ಹರಿವು 1 ಲಕ್ಷ ಕ್ಯೂಸೆಕ್ಗಿಂತ ಹೆಚ್ಚಾಗಿದೆ. ಪ್ರತಿನಿತ್ಯ 8 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಸಂಗ್ರವಾಗುತ್ತಿದೆ ಎಂದರು.
ಮುಂದಿನ 7 ದಿನಗಳ ಒಳಗೆ ನಗರದ ನೀರಿನ ಸಮಸ್ಯೆ ನೀಗಿಸಲು ಆಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೆರೆಯ ಹತ್ತಿರ ಕಾಲುವೆಗೆ ಬಿದ್ದಿರುವ ಕಲ್ಲುಗಳನ್ನು, ನಾಲೆಯಲ್ಲಿ ತುಂಬಿರುವ ಮಣ್ಣನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಹೆಚ್ಚುವರಿಯಾಗಿ ಜೆಸಿಬಿ ತೆಗೆದುಕೊಂಡು ಶೀಘ್ರವಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದರು.
ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇರುದ್ರಪ್ಪ ಮತ್ತು ಹೇಮಾವತಿ ಇಲಾಖೆಯ ಕಿರಿಯ ಅಧಿಕಾರಿಗಳು ಇದ್ದರು.