ತುಮಕೂರು: ನಗರದ ಕೋಟೆ ಆಂಜನೇಯ ದೇವಸ್ಥಾನ ಸಮೀಪ ಚಿಕ್ಕಪೇಟೆಯ ಹಿರೇಮಠ ರಸ್ತೆ ಹತ್ತಿರ ನಾಗರಾಜಶೆಟ್ಟಿ ಎಂಬುವರ ಮನೆ ಮೇಲಿದ್ದ ಮೊಬೈಲ್ ಟವರ್ ಅನಾಮತ್ತಾಗಿ ಉರುಳಿ ಬಿದ್ದಿದೆ.
ಟವರ್ ಬಿದ್ದ ಶಬ್ದಕ್ಕೆ ಸುತ್ತಮುತ್ತಲಿನ ನಿವಾಸಿಗಳು ಗಾಬರಿಗೊಂಡು ಮನೆಯಿಂದ ಹೊರ ಓಡಿ ಬೇರೆ ಕಡೆ ರಕ್ಷಣೆ ಪಡೆದರು. ವ್ಯಾಪಾರಿ ಮಳಿಗೆ, ಜಿಮ್ ಹಾಗೂ ಅಕ್ಕಪಕ್ಕದಲ್ಲಿ ಮನೆಗಳಿದ್ದು, ಈ ಮನೆಗಳ ಮೇಲೆಯೇ ಟವರ್ ಬಿದ್ದಿದೆ.
ಮಳೆ ಗಾಳಿ ಇದ್ದುದರಿಂದ ಮನೆ ಮೇಲೆ, ಮನೆ ಹೊರಗಡೆ ಜನ ಇರಲಿಲ್ಲ. ಹೀಗಾಗಿ ಯಾರಿಗೂ ಅಪಾಯ ಆಗಿಲ್ಲ ಎಂದು ನಿವಾಸಿಗಳು ಹೇಳಿದರು.
ನಗರದ ಜನರಲ್ ಕಾರ್ಯಪ್ಪ ರಸ್ತೆಯ ಗ್ರಾಮೀಣ ಠಾಣೆ ಮುಂಭಾಗದಲ್ಲಿರುವ ಪೊಲೀಸ್ ವಸತಿ ಸಮುಚ್ಚಯದಲ್ಲಿ ಹಾಕಿದ್ದ ಸೋಲಾರ್ ತಟ್ಟೆಗಳು(ಪ್ಯಾನಲ್) ನೆಲಕಚ್ಚಿವೆ. ಎಲ್ಲೆಂದರಲ್ಲಿ ಬಿದ್ದು, ಪ್ಯಾನಲ್ ಒಡೆದು ಹೋಗಿವೆ.
ಶಿರಾ ಗೇಟ್ ಹತ್ತಿರ ಜಿಲ್ಲಾಧಿಕಾರಿ ನಿವಾಸ ಸಮೀಪ ರಸ್ತೆ ಪಕ್ಕದ ಗಿಡದ ಟೊಂಗೆಗಳು ಮುರಿದು ರಸ್ತೆಗೆ ಬಿದ್ದಿದ್ದವು. ಇಲ್ಲಿಯೂ ಜನರು ಅಪಾಯದಿಂದ ಪಾರಾಗಿದ್ದಾರೆ.