ತಿಪಟೂರು: ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ನಗರ ವಾಸಿಗಳ ನಿದ್ದೆ ಕೆಡಿಸಿತು. ಚರಂಡಿ ತುಂಬಿ ರಸ್ತೆಗಳಲ್ಲೆಲ್ಲಾ ಹರಿದ ನೀರು ಅಂಗಡಿ, ಮನೆಗಳಿಗೆ ನುಗ್ಗಿತು.
ಗುರುವಾರ ರಾತ್ರಿ 9.30ಕ್ಕೆ ಆರಂಭವಾದ ಮಳೆ ಶುಕ್ರವಾರ ಬೆಳೆಗ್ಗೆ 4 ರವರೆಗೆ ಸುರಿಯಿತು. ನಗರದಲ್ಲಿ 83.6 ಮಿ.ಮೀ ಮಳೆಯಾದರೆ, ತಾಲ್ಲೂಕಿನಲ್ಲಿ ಸರಾಸರಿ 41.71 ಮಿ.ಮೀ ಮಳೆಯಾಯಿತು.
ಗಾಂಧಿನಗರ, ಇಂದಿರಾನಗರ, ವಿನಾಯಕ ನಗರ ಸೇರಿದಂತೆ ಹಲವು ಬಡವಾಣೆಗಳಲ್ಲಿ ಚರಂಡಿ, ಒಳ ಚರಂಡಿ ತುಂಬಿ ರಾಜಕಾಲುವೆಗಳಿಂದ ಹೊರ ಬಂದು ನೀರು ರಸ್ತೆ ಮೇಲೆ ಹರಿಯಿತು. ಎನ್.ಎಚ್ 206ರಲ್ಲಿ ಪಾದಚಾರಿ ಮಾರ್ಗ, ರಸ್ತೆ ವಿಭಜಕಗಳು ತಿಳಿಯದಂತೆ ನೀರು ನಿಂತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಕೋಡಿ ವೃತ್ತದಿಂದ ಬೆಂಗಳೂರು ಮಾರ್ಗವಾಗಿ ತೆರಳುವ ಎನ್.ಎಚ್. 206ರಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸಂಚಾರ ಕಷ್ಟವಾಗಿತ್ತು.
ನಗರದ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿತ್ತು. ನಗರಸಭೆ ಆಯುಕ್ತ ಉಮಾಕಾಂತ್ ರಾತ್ರಿಯಿಡಿ ಸಂಚರಿಸಿ ಕಟ್ಟಿಕೊಂಡಿದ್ದ ಚರಂಡಿಗಳನ್ನು ತೆರವುಗೊಳಿಸಿದರು. ಕೆಲ ಸ್ಥಳಗಳಿಗೆ ಶಾಸಕ ಬಿ.ಸಿ. ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು.