ವಿಜಯಪುರ: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಜಯಪುರದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ರ್ಯಾಲಿ ಉದ್ಘಾಟಿಸಿ, ಕೆಲವೇ ಕ್ಷಣಗಳಲ್ಲಿ ಮಾತನಾಡಲಿದ್ದಾರೆ.
2016ರ ನಂತರ ಇದೇ ಮೊದಲ ಬಾರಿಗೆ ಸೋನಿಯಾ ಗಾಂಧಿ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಅವರ ಮಾತುಗಳನ್ನು ಕೇಳಲು ಜನರು ಕಾತರದಿಂದ ಕಾಯುತ್ತಿದ್ದಾರೆ.
ನೆತ್ತಿ ಸುಡುವ ಕೆಂಡದಂತ ಬಿಸಿಲನ್ನು ಲೆಕ್ಕಿಸದೆ, ತಂಡೊಪತಂಡವಾಗಿ ಜನರು ನಗರದ ಸೊಲ್ಲಾಪುರ ರಸ್ತೆಯ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಯ ಎ.ಎಸ್.ಟಿ. ವಾಣಿಜ್ಯ ಕಾಲೇಜಿನ ಆವರಣಕ್ಕೆ ಬರುತ್ತಿದ್ದಾರೆ.
ಬಹುತೇಕ ಆಸನಗಳು ಭರ್ತಿಯಾಗಿವೆ. ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಬಾಗಲಕೋಟೆ, ಬೆಳಗಾವಿಯ ಚಿಕ್ಕೋಡಿ ಲೋಕಸಭಾ ಕೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಜನರು ಹಾಗೂ ಯಾದಗಿರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಜನರು ಸಹ ರ್ಯಾಲಿಗೆ ಆಗಮಿಸಿದ್ದಾರೆ.
ಬಿಸಿಲ ಬಾಯಾರಿಕೆ ತಣಿಸಲು ರಾಶಿ–ರಾಶಿ ನೀರಿನ ಪ್ಯಾಕೇಟ್ಗಳನ್ನು ಜನರಿಗೆ ವಿತರಿಸಲಾಗುತ್ತಿದೆ.
ಸೋನಿಯಾ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದು, ನೇರವಾಗಿ ಎ.ಎಸ್.ಟಿ. ಕಾಲೇಜು ಆವರಣಕ್ಕೆ ಆಗಮಿಸಿ, ಮತದಾರರ ಮನಗೆಲ್ಲಲು ಭಾಷಣ ಮಾಡಲಿದ್ದಾರೆ.