ಕುಣಿಗಲ್: ಎಡೆಯೂರು ರೈಲ್ವೆ ನಿಲ್ದಾಣದಲ್ಲಿ ಜೂ.10ರಂದು ರಾತ್ರಿ ನಡೆದಿದ್ದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡಿ ಪಾಳ್ಯದ ದೇವರಾಜು ಎಂಬಾತನನ್ನು ಅಮೃತೂರು ಪೊಲೀಸರು ಬಂಧಿಸಿದ್ದಾರೆ.
ತನಗೆ ಪರಿಚಿತವಾಗಿದ್ದ ವ್ಯಕ್ತಿಯ ಜತೆ ಎಡೆಯೂರು ರೈಲ್ವೆ ನಿಲ್ದಾಣದಲ್ಲಿ ಅಂದು ದೇವರಾಜು ಊಟ ಮಾಡುತ್ತಿದ್ದ. ಈ ವೇಳೆ ಪರಿಚಿತ ವ್ಯಕ್ತಿ ಮತ್ತು ದೇವರಾಜು ನಡುವೆ ₹50 ವಿಚಾರವಾಗಿ ಜಗಳ ನಡೆದಿದೆ. ದೇವರಾಜು ಅವೇಶದಿಂದ ಕಲ್ಲಿನಿಂದ ಜಜ್ಜಿ ಪರಾರಿಯಾಗಿದ್ದ.
ರೈಲ್ವೆ ನಿಲ್ದಾಣದ ಅಧಿಕಾರಿ ಭಾಸ್ಕರ್ ದೂರಿನ ಮೇರೆಗೆ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕೊಲೆಯಾದ ವ್ಯಕ್ತಿಯ ಹೆಸರು ರಾಜಣ್ಣ ಎನ್ನುವುದು ಪತ್ತೆಯಾಗಿತ್ತು. ಆದರೆ ವಿಳಾಸ ಮಾತ್ರ ಪತ್ತೆಯಾಗಲಿಲ್ಲ. ಆರೋಪಿ ದೇವರಾಜು ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಹೂವು ಮಾರುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಸಿಪಿಐ ನಿರಂಜನ್ ಕುಮಾರ್, ಪಿಎಸ್ಐ ಮಂಜು, ಸಿಬ್ಬಂದಿ ದಯಾನಂದ್, ನವೀನ್, ನಟರಾಜು, ಮಂಜೆಗೌಡ, ಪುಟ್ಟರಾಮು, ರಂಗೇಗೌಡ, ರಾಮಪ್ಪ ಕಾರ್ಯಾ ಚರಣೆಯ ತಂಡದಲ್ಲಿ ಇದ್ದರು.