ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಾಣಸಂದ್ರ ಲೋಕೋಪಯೋಗಿ ಇಲಾಖೆಯ ಹಳೆಯ ಶೆಡ್ನಲ್ಲಿ ಮೃತಪಟ್ಟಿದ್ದ ಅನಾಥ ವೃದ್ಧೆಯೊಬ್ಬರ ಶವಸಂಸ್ಕಾರವನ್ನು ಶನಿವಾರ ಪಟ್ಟಣದ ಮುಸ್ಲಿಂ ಯುವಕರು ಮಾಡಿದ್ದಾರೆ.
ಬಾಣಸಂದ್ರದ ಲೋಕೋಪಯೋಗಿ ಇಲಾಖೆಯ ಹಳೆಯ ಶೆಡ್ನಲ್ಲಿ ಏಳೆಂಟು ವರ್ಷಗಳಿಂದ ಸುಮಾರು 65 ವರ್ಷದ ವೃದ್ಧೆಯೊಬ್ಬರು ವಾಸವಿದ್ದರು. ದಿನವೂ ಗ್ರಾಮದಲ್ಲಿನ ಚಿಂದಿ ವಸ್ತುಗಳನ್ನು ಆಯ್ದುಕೊಂಡು ಓಡಾಡುತ್ತಿದ್ದರು. ರೈಲ್ವೆ ನಿಲ್ದಾಣದಲ್ಲಿ ಬಿಕ್ಷೆ ಬೇಡಿಕೊಂಡು ಬಂದು ಶೆಡ್ನಲ್ಲಿ ಮಲಗುತ್ತಿದ್ದರು. ಲಾಕ್ಡೌನ್ ಆದ ಮೇಲೆ ಎಲ್ಲೂ ಹೋಗದೆ ಶೆಡ್ನಲ್ಲಿಯೇ ಉಳಿದಿರುವುದು ಗಮನಿಸಿದ ಗ್ರಾಮದ ಕೆಲವರು ಏಪ್ರಿಲ್ 28ರಂದು ಅಲ್ಲಿನ ಪಿಡಿಒ ಎಸ್.ಸೋಮಶೇಖರ್ ಅವರಿಗೆ ತಿಳಿಸಿದ್ದಾರೆ.
ಪಿಡಿಒ ಅನಾಥಾಶ್ರಮಗಳಿಗೆ ಸೇರಿಸಲು ಹಲವು ಕಡೆ ವಿಚಾರಿಸಿದ್ದಾರೆ. ಕೊನೆಗೆ ತುಮಕೂರಿನ ಅನಾಥಾಶ್ರಮವೊಂದು ಸೇರಿಸಿಕೊಳ್ಳುವುದಾಗಿಯೂ ಕೋವಿಡ್ ಪರೀಕ್ಷೆ ಮಾಡಿಸುವಂತೆ ಹೇಳಿದ್ದಾರೆ. ಶುಕ್ರವಾರ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಶನಿವಾರ ಮುಂಜಾನೆಯೇ ವೃದ್ಧೆ ಮೃತಪಟ್ಟಿದ್ದಾರೆ.
ಮುಸ್ಲಿಂ ಯುವಕರ ತಂಡ ಶವ ಸಾಗಿಸಲು ವಾಹನಕ್ಕೆ ಪರದಾಡಿದ್ದು, ಕೊನೆಗೆ ಅದೇ ಗ್ರಾಮದ ಚೋಟು ಎಂಬ ಯುವಕ ಶವ ಸಾಗಿಸಲು ನೆರವಾಗಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ್, ಪಿಡಿಒ ಎಸ್.ಸೋಮ ಶೇಖರ್, ಮುಸ್ಲಿಂ ಯುವಕರಾದ ಜಫ್ರಲ್ಲಾ, ಹಾಜಿ ಆರಿಫ್ ಪಾಷಾ, ನಯಾಜ್ ಪಾಷಾ, ವಯಾಜ್, ಅಬ್ದುಲ್ ರಜಾಕ್, ತಬ್ರೆಜ್ ಪಾಷಾ, ಅಬ್ದುಲ್ ಪಾಷಾ, ಫೈರೋಜ್ ಖಾನ್, ಅಸ್ಲಾಂಪಾಷಾ, ಸೈಯದ್ನೂರುಲ್ಲಾ ಭಾಗಿಯಾಗಿದ್ದರು.