ತುಮಕೂರು:ಪರಿಸರ ಮಾಲಿನ್ಯದಿಂದ ಇಂದು ಪ್ರಾಕೃತಿಕ ವಿಪತ್ತು ಸಂಭವಿಸುತ್ತಿದ್ದು, ಕುಡಿಯುವ ನೀರಿಗೆ ಅಭಾವ ಉಂಟಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ‘ವಿಶ್ವ ಭೂ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಮುಂದಿನ ಭವಿಷ್ಯದ ಜೀವನಕ್ಕಾಗಿ ಪರಿಸರದ ಜತೆಗೆ ನೈಸರ್ಗಿಕ ಅರಣ್ಯ ಪ್ರದೇಶವನ್ನು ಉಳಿಸಬೇಕಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ನೀರು ಸಾಕಷ್ಟಿದೆ ಎಂದು ಪೋಲು ಮಾಡುವುದು ಒಳಿತಲ್ಲ. ಮಿತವಾಗಿ ಬಳಸಬೇಕು. ಸಸ್ಯ ಸಂಪತ್ತು, ಜಲಸಂಪತ್ತು ಅತಿ ಅಮೂಲ್ಯ. ಅದನ್ನು ಕಾಪಾಡುವುದು ಎಲ್ಲರ ಕರ್ತವ್ಯ ಎಂದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ, ‘ಮಾನವನಿಗೆ ಶುದ್ಧ ಗಾಳಿ, ನೀರು, ಅಹಾರವನ್ನು ಪರಿಸರ ನೀಡುತ್ತಿರುವುದರಿಂದ ಪ್ರತಿಯೊಬ್ಬರೂ ನೆಲ, ಜಲವನ್ನು ರಕ್ಷಣೆ ಮಾಡಬೇಕು ಎಂದರು.
ಮಾಲಿನ್ಯಕ್ಕೆ ಕಡಿವಾಣ ಇಲ್ಲದ ಕಾರಣ ವಾತಾವರಣ ಹೆಚ್ಚಾಗಿ ಕಲುಷಿತಗೊಳ್ಳುತ್ತಿದೆ. ಮನುಷ್ಯನ ಸ್ವಾರ್ಥಕ್ಕೆ ಪರಿಸರ ಬಲಿಯಾಗುತ್ತಿದೆ. ಪರಿಸರಕ್ಕೆ ಹಾನಿಯಗುವ ಪ್ಲಾಸ್ಟಿಕ್, ವಿಷಪೂರಿತ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯಾಗಬೇಕೆಂದರೆ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಒಂದಾದರೂ ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಕೃಷ್ಣಪ್ಪ ಮಾತನಾಡಿ, ‘ನಾವು ನಿಂತ ನೆಲವನ್ನೇ ನಾಶ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಭೂಮಿಯನ್ನು ರಕ್ಷಣೆ ಮಾಡಬೇಕಿದೆ. ಅದು ಚೆನ್ನಾಗಿದ್ದರೆ ಮಾತ್ರ ನಾವು ಉತ್ತಮವಾದ ಗಾಳಿ ಸವಿಯಲು ಸಾಧ್ಯ, ಇಲ್ಲದಿದ್ದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ‘ನಾವು ಮನುಷ್ಯರು ಪ್ರಕೃತಿಯ ಜೀವಿಗಳು ಪ್ರಕೃತಿಯ ಎಲ್ಲಾ ಹೋಗುಗಳು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಅರಿತು ಉಳಿಸುವುದು ನಮ್ಮ ಧರ್ಮ’ ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.