ಶಿರಾ: ‘ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಮೇಲೆ ನನ್ನ ಹೊಸ ರಾಜಕಾರಣ ಪ್ರಾರಂಭವಾಗಲಿದೆ. ಹಾಲು ನೀಡುತ್ತೀರೊ, ವಿಷ ನೀಡುತ್ತೀರೊ ನೀವೆ ನಿರ್ಣಯಿಸಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಇಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
‘ಈ ಚುನಾವಣೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ರಾಜಕೀಯವಾಗಿ ನಾನು ಮುಂದವರಿಯಬೇಕೊ, ಬೇಡವೊ ಎನ್ನುವ ನಿರ್ಣಯ ಇದರ ಮೇಲೆ ನಿಂತಿದೆ. ನನಗೆ ಅಧಿಕಾರದ ಅಸೆ ಇಲ್ಲ. ಆದರೆ ರೈತರು ಹಾಗೂ ಬಡವರ ಸೇವೆ ಮಾಡಲು ನಿಮ್ಮ ಜತೆ ಇದ್ದೇನೆ’ ಎಂದರು.
ಕಾಂಗ್ರೆಸ್ ಪಕ್ಷದ ಸಂಕುಚಿತ ಮನೋಭಾವನೆಯಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 2023ರ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಜೆಡಿಎಸ್ನ್ನು ಮತ್ತೆ ಅಧಿಕಾರಕ್ಕೆ ತರಲು ಈ ಚುನಾವಣೆಯ ಫಲಿತಾಂಶ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.
ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ ಶಿರಾ ಕ್ಷೇತ್ರದ ಮುಖಂಡರ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಯಾರೇ ಅಭ್ಯರ್ಥಿಯಾದರೂ ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಿ, ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.