ತುಮಕೂರು: ಹೇಮಾವತಿ ನಾಲಾ ವೀಕ್ಷಣೆಗೆ ತೆರಳುವ ಮುನ್ನ ಇಲ್ಲಿನ ಸಿದ್ಧಗಂಗಾಮಠಕ್ಕೆ ಭಾನುವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದರು. ಆಸಮಯದಲ್ಲಿ ಪಕ್ಷದ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಘೋಷಣೆ ಕೂಗಿದರು.
ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ ಈ ಮೈತ್ರಿ ಸರ್ಕಾರ ರಾಜ್ಯದ ಜನರ, ಶಾಸಕರ ವಿಶ್ವಾಸ ಕಳೆದುಕೊಂಡಿದೆ. ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇನೆ. ಮುಂದೇನಾಗುತ್ತೊ ನೋಡೋಣ’ ಎಂದರು.
‘ಸರ್ಕಾರ ರಚನೆಗೆ ಒಂದು ವೇಳೆ ಅವಕಾಶ ದೊರಕಿ ಬಂದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನೋಡ್ರಿ ನಾವೇನು ಸನ್ಯಾಸಿಗಳಲ್ಲ ಎಂದು ಹೇಳಿದರು.
ನಾಲಾ ವೀಕ್ಷಣೆ: ಹೇಮಾವತಿ ನಾಲಾದ ಬಾಗೂರು ನವಿಲೆ ವೀಕ್ಷಣೆ ಮಾಡಿದ ಬಳಿಕ ತುರುವೇಕೆರೆಯಲ್ಲಿ ಮಧ್ಯಾಹ್ನ ಸ್ಥಳೀಯ ಮುಖಂಡರ ಭೇಟಿ, ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಮಧ್ಯಾಹ್ನ 3.45ಕ್ಕೆ ಯಡಿಯೂರು ಸಿದ್ಧಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡುವರು. ಸಂಜೆ 5 ಗಂಟೆಗೆ ತುಮಕೂರಿನಲ್ಲಿ ಸಿದ್ಧಗಂಗಾಮಠದಲ್ಲಿ ಜಲಶಕ್ತಿ ಆಂದೋಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ಯಡಿಯೂರಪ್ಪ ಅವರೊಂದಿಗೆ ಸಂಸದ ಜಿ.ಎಸ್.ಬಸವರಾಜು ಹಾಗೂ ಪಕ್ಷದ ಮುಖಂಡರು ಇದ್ದರು.