ಪಾವಗಡ:‘ಫೆಬ್ರವರಿ 5ರೊಳಗೆ ನಾಗಲಮಡಿಕೆ ಮೂಲಕ ಆಂಧ್ರಪ್ರದೇಶದ ಪೇರೂರು ಅಣೆಕಟ್ಟಿಗೆ ನೀರು ಹರಿಸಲಾಗುವುದು’ ಎಂದು ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಭಾನುವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಸರ್ಕಾರದ ಅನುದಾನ ಬರುವುದು ತಡವಾಗಬಹುದು. ಹೀಗಾಗಿ ಸ್ವಂತ ಖರ್ಚಿನಿಂದ ಕಾಮಗಾರಿ ಆರಂಭಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಉತ್ತರ ಪಿನಾಕಿನಿ ನದಿ ಮೂಲಕ ನೀರು ಹರಿಸಲಾಗುವುದು’ ಎಂದರು.
‘ಆಂಧ್ರಪ್ರದೇಶದ ರೊದ್ದಂ ಕಾಲುವೆಯಿಂದ ತುರ್ಕಲಾಪಟ್ನಂನಿಂದ ನದಿಯಲ್ಲಿಯೇ ಕಾಲುವೆ ತೋಡಿ ನಾಗಲಮಡಿಕೆ ಚೆಕ್ ಡ್ಯಾಂ ತುಂಬಿಸಿ ಅಲ್ಲಿಂದ ಪೇರೂರಿಗೆ ನೀರು ಹರಿಸಲಾಗುವುದು. ತಾಲ್ಲೂಕಿನಾದ್ಯಂತ ಇಲ್ಲ ಸಲ್ಲದ ಊಹಾಪೋಹಗಳನ್ನು ಹಬ್ಬಿಸಲಾಗುತ್ತಿದೆ’ ಎಂದರು.
ಹಿಂದಿನ ಶಾಸಕಿ ಪರಿಟಾಲ ಸುನಿತಾ, ‘ನಾಗಲಮಡಿಕೆ ಹೋಬಳಿ ರೈತರಿಗೆ ನೀರು ಹರಿಸುವುದಿಲ್ಲ ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸಿದ್ದರು. ಆದರೆ ರಾಪ್ತಾಡು ಕ್ಷೇತ್ರದಷ್ಟೇ ಪ್ರಾಮುಖ್ಯತೆಯನ್ನು ಪಾವಗಡ ತಾಲ್ಲೂಕಿನ ರೈತರಿಗೂ ನೀಡಲಾಗುವುದು. ಎರಡೂ ರಾಜ್ಯದವರು ಅಣ್ಣ ತಮ್ಮಂದಿರಂತೆ ಸೌಹಾರ್ದದಿಂದ ಇದ್ದೇವೆ. ಅದನ್ನು ಮುಂದುವರೆಸಿಕೊಂಡು ಹೋಗೋಣ’ ಎಂದರು.
ಹಿಂದೂಪುರ ಲೋಕಸಭೆ ಸದಸ್ಯ ಗೋರೆಂಟ್ಲ ಮಾಧವ್, ಪೇರೂರು ಅಣೆಕಟ್ಟಿಗೆ ನೀರು ಹರಿಸುವ ಸಲುವಾಗಿ ಜನತೆಯ ಕಾಲಿಗೆ ಬೀಳಲು ಸಿದ್ದರಿದ್ದೇವೆ. ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ಈ ಹಿಂದೆ ಬಿದ್ದಿದ್ದ ರಕ್ತದ ಕಲೆಗಳನ್ನು ಕೃಷ್ಣೆಯ ನೀರಿನಿಂದ ತೊಳೆಯಲು ಬದ್ಧರಾಗಿದ್ದೇವೆ ಎಂದರು.
ರೈತ ಸಮುದಾಯದವರು ಎಲ್ಲರೂ ಒಂದೆ. ಹೀಗಾಗಿ ನಾಗಲಮಡಿಕೆ ಹೋಬಳಿ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಕಾಲುವೆಗೆ ಪಾಲಿಥಿನ್ ಪೇಪರ್ ಅಳವಡಿಸಿದರೆ ಅದರಿಂದ ತಾಲ್ಲೂಕಿನ ಜನತೆಗೆ ಅನುಕೂಲವಾಗುವುದಿಲ್ಲ. ನಾಗಲಮಡಿಕೆ ಚೆಕ್ ಡ್ಯಾಂ ತುಂಬಿಸಿ ನಂತರ ನೀರು ಹರಿಸಿ ಎಂದು ಮನವಿ ಮಾಡಿದರು.
ಮುಖಂಡ ತಿಮ್ಮಾರೆಡ್ಡಿ, ಎಸ್.ಕೆ.ರೆಡ್ಡಿ, ಗಂಗುಲ ಭಾನುಮತಿ, ಮೀನುಗ ನಾಗರಾಜು, ಸಿಮೆಂಟ್ ಮಂಜು, ಬೋರ್ವೆಲ್ ಮಂಜುನಾಥ ರೆಡ್ಡಿ, ರಾಮಕೃಷ್ಣರೆಡ್ಡಿ, ರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.