ತುಮಕೂರು: ‘ಪ್ರಜಾವಾಣಿ–75’ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾಕಥಾನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೊರೆಯುವ ಚಳಿಯಲ್ಲೂ ಮುಂಜಾನೆಯೇ ನೂರಾರು ಮಂದಿ ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ಯುವಜನರು, ವಿದ್ಯಾರ್ಥಿ ಸಮೂಹ, ಪ್ರಾಧ್ಯಾಪಕರು, ಶಿಕ್ಷಕರ ವರ್ಗ, ವೈದ್ಯರು, ನರ್ಸ್, ಎನ್ಸಿಸಿ, ಎನ್ಎಸ್ಎಸ್ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ವಾಕಥಾನ್ನಲ್ಲಿ ಪಾಲ್ಗೊಂಡಿದ್ದರು.
ಚಳಿಯನ್ನೂ ಲೆಕ್ಕಿಸದೆ ಹೆಜ್ಜೆಗಳನಿಟ್ಟರು. ನಡಿಗೆಯ ಮೂಲಕ ಚಳಿ ದೂರ ಮಾಡಿಕೊಂಡು ಮತ್ತಷ್ಟು ಬಿರುಸಾಗಿ ಸಾಗಿದರು. ವಾಕಥಾನ್ ಆರಂಭದ ಸ್ಥಳಕ್ಕೆ ಬಾರದವರು ರಸ್ತೆ ಮಧ್ಯದಲ್ಲಿ ಬಂದು ಸೇರಿಕೊಂಡರು. ವಾಕಥಾನ್ ಕೊನೆಗೊಳ್ಳುವವರೆಗೂ ಜನರು ಬಂದು ಸೇರಿಕೊಳ್ಳುತ್ತಲೇ ಇದ್ದರು.
ಬಿಜಿಎಸ್ ವೃತ್ತದಲ್ಲಿ (ಟೌನ್ಹಾಲ್ ವೃತ್ತ) ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್ ಶಹಪೂರವಾಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಜಂಟಿಯಾಗಿ ವಾಕಥಾನ್ಗೆ ಚಾಲನೆ ನೀಡಿದರು.
ನಂತರ ಅವರೂ ನಡಿಗೆ ಆರಂಭಿಸಿದರು. ಪ್ರಜಾವಾಣಿ ಪತ್ರಿಕೆಯ ಸಾಧನೆ, 75 ವರ್ಷಗಳ ಇತಿಹಾಸ, ಪತ್ರಿಕೆಯ ಜನಪರ ಕಾಳಜಿಯನ್ನು ಮೆಲುಕು ಹಾಕುತ್ತಾ, ಯುವಜನರೊಟ್ಟಿಗೆ ಚರ್ಚಿಸುತ್ತಾ ಸಾಗಿದರು.
ಬಿಜಿಎಸ್ ವೃತ್ತದಿಂದ ಬಿ.ಎಚ್.ರಸ್ತೆ, ಭದ್ರಮ್ಮ ವೃತ್ತ, ಶಿವಕುಮಾರ ಸ್ವಾಮೀಜಿ ವೃತ್ತದ ಮೂಲಕ ಸಾಗಿ ಸಿದ್ಧಗಂಗಾ ಆಸ್ಪತ್ರೆ ಆವರಣದಲ್ಲಿ ಕೊನೆಗೊಂಡಿತು. ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರು ಮುಕ್ತಾಯ ಸಮಾರಂಭದಲ್ಲಿ ಜತೆಯಾದರು.
ಪ್ರಜಾವಾಣಿ–75 ಅಮೃತ ಮಹೋತ್ಸವ ವಾಕಥಾನ್ ಅನ್ನು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋ ಧನಾ ಸಂಸ್ಥೆ ಹಾಗೂ ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ವಾಕಥಾನ್ ಆಯೋಜಿಸಲಾಗಿತ್ತು.