ತುಮಕೂರು: ಗುರುವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಮಹಾನಗರ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸರ್ ಮಾಡಿ ಸ್ವಚ್ಛಗೊಳಿಸಲಾಯಿತು.
ಮಹಾನಗರ ಪಾಲಿಕೆಗೆ ಒಳಪಡುವ ಪರೀಕ್ಷಾ ಕೇಂದ್ರಗಳಿಗೆ ಮೇಯರ್ ಫರಿದಾ ಬೇಗಂ ಭೇಟಿ ನೀಡಿ ಪಾಲಿಕೆಯಿಂದ ಶಾಲಾ ಆವರಣ, ಕೊಠಡಿಗಳನ್ನು ಪರಿಶೀಲಿಸಿದರು.
ಈ ವೇಳೆ ಅವರು ಮಾತನಾಡಿ, ‘ಪಾಲಿಕೆಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕ ಪಡದೆ ನಿರಾಳವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಬಹುದು’ ಎಂದು ಹೇಳಿದರು.
ಡಿಡಿಪಿಐ ಕಾಮಾಕ್ಷಿ, ‘ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಮಕ್ಕಳು ನಮ್ಮ ಮಕ್ಕಳು ಇದ್ದಂತೆ, ಎಲ್ಲರೂ ಜಾಗರೂಕತೆಯಿಂದ ಪರೀಕ್ಷೆಯನ್ನು ಯಶಸ್ವಿಗೊಳಿಸೋಣ’ ಎಂದರು.
ಉಪಮೇಯರ್ ಶಶಿಕಲಾ ಗಂಗಾಹನುಮಯ್ಯ, ನಗರ ಯೋಜನಾ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ನಟೇಶ್, ಜಿ.ಕೃಷ್ಣಮೂರ್ತಿ, ಕೃಷ್ಣಮೂರ್ತಿ, ನಾಗೇಶ್ ಕುಮಾರ್ ಇದ್ದರು.