ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಚಕ್ರಗಳು ಪಂಚರ್‌ ಆದ ಕಾರಿನಂತಾಗಿದೆ ಭಾರತ ಆರ್ಥಿಕತೆಯ ಸ್ಥಿತಿ: ಪಿ. ಚಿದಂಬರಂ

Last Updated 4 ಜೂನ್ 2018, 11:52 IST
ಅಕ್ಷರ ಗಾತ್ರ

ನವದೆಹಲಿ: ತೈಲ ಬೆಲೆ ಏರಿಕೆ ಹಾಗೂ ಅರ್ಥಿಕತೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೇಂದ್ರ ಹಣಕಾಸು ಖಾತೆ ಮಾಜಿ ಸಚಿವ ಪಿ. ಚಿದಂಬರಂ ವಾಗ್ದಾಳಿ ನಡೆಸಿದರು. ‘ಭಾರತದ ಆರ್ಥಿಕತೆ ಸ್ಥಿತಿ ಮೂರು ಚಕ್ರಗಳು ಪಂಚರ್‌ ಆದ ಕಾರಿನಂತಾಗಿದೆ’ ಎಂದು ವ್ಯಂಗ್ಯವಾಡಿದರು.

ಮಹಾರಾಷ್ಟ್ರದ ಥಾಣೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಖಾಸಗಿ ಹೂಡಿಕೆ, ಖಾಸಗಿ ಬಳಕೆ, ರಫ್ತು ಹಾಗೂ ಸರ್ಕಾರದ ವೆಚ್ಚಗಳು ಆರ್ಥಿಕ ಅಭಿವೃದ್ಧಿಯ ಯಂತ್ರಗಳು. ಅವು ಕಾರಿನ ನಾಲ್ಕು ಚಕ್ರಗಳಂತೆ ಕಾರ್ಯನಿರ್ವಹಿಸುತ್ತವೆ. ಯಾವುದೇ ಒಂದು ಅಥವಾ ಎರಡು ಚಕ್ರಗಳು ಪಂಚರ್‌ ಆದರೂ ವೇಗ ಕಡಿಮೆಯಾಗಿಬಿಡುತ್ತದೆ. ಆದರೆ ಆರ್ಥಿಕತೆಯ ವಿಚಾರದಲ್ಲಿ ಮೂರು ಚಕ್ರಗಳು ಪಂಚರ್‌ ಆದಂತಾಗಿದೆ’ ಎಂದು ವ್ಯಂಗ್ಯವಾಡಿದರು.

ಕೇವಲ ಆರೋಗ್ಯ ಹಾಗೂ ಇತರ ಕೆಲವೇ ಸೌಲಭ್ಯಗಳಿಗಾಗಿ ಸರ್ಕಾರದ ವೆಚ್ಚಗಳು ಮುಂದುವರಿಯುತ್ತಿವೆ. ಇದನ್ನು ಸರಿದೂಗಿಸಲು, ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ಎಲ್‌ಪಿಜಿ ಮೇಲಿನ ತೆರಿಗೆಯನ್ನೂ ಮುಂದುವರಿಸಲಾಗುತ್ತಿದೆ. ತೆರಿಗೆಗಳ ಮೂಲಕ ಗಳಿಸುತ್ತಿರುವ ಸಾರ್ವಜನಿಕರ ಹಣವನ್ನು ಕೆಲವು ಸೌಲಭ್ಯಗಳಿಗಾಗಿ ವಿನಿಯೋಗ ಮಾಡಲಾಗುತ್ತಿದೆ. ವಿದ್ಯುತ್‌ ಉತ್ಪಾದನೆ ಅಥವಾ ಬೃಹತ್‌ ಕೈಗಾರಿಕಾ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಯಾವುದಾದರೂ ಹೂಡಿಕೆಯಾಗಿದೆಯೇ? ಎಂದು ಪ್ರಶ್ನಿಸಿದರು.

ಹತ್ತು ಪ್ರಮುಖ ಕಂಪನಿಗಳು ದಿವಾಳಿಯಾಗುತ್ತಿವೆ ಎಂದರೆ ಅದರಲ್ಲಿ 5 ಸ್ಟೀಲ್‌ ಕಂಪನಿಗಳೇ ಆಗಿರುತ್ತವೆ. ಹೀಗಿರುವಾಗ ಇತರೆ ವಲಯಗಳ ಮೇಲಿನ ಹೂಡಿಕೆಯನ್ನು ನೀವು ಹೇಗೆ ನಿರೀಕ್ಷಿಸುತ್ತೀರಿ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಇದೇ ವೇಳೆ ಜಿಎಸ್‌ಟಿ ತೆರಿಗೆ ವ್ಯವಸ್ಥೆ ವಿರುದ್ಧವೂ ಅವರು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT