ಬೆಂಗಳೂರು: ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಕಲಬುರ್ಗಿ ಜಿಲ್ಲೆ ಅಫಜಲಪುರ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ಭೇಟಿಯಾದ ಮಾಲೀಕಯ್ಯ, ಈ ನಿರ್ಧಾರ ಪ್ರಕಟಿಸಿದರು.
‘ಸಿದ್ದರಾಮಯ್ಯನವರ ಮೇಲೆ ವಿಶ್ವಾಸವಿಟ್ಟು ಎಲ್ಲ ಅವಮಾನ ಸಹಿಸಿಕೊಂಡು ಪಕ್ಷದಲ್ಲಿ ಉಳಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಒಲಿಸಿಕೊಳ್ಳಲು ಅವರ ಮಗ ಪ್ರಿಯಾಂಕ್ಗೆ ಸಚಿವ ಸ್ಥಾನ ಕೊಟ್ಟು ನನಗೆ ಅನ್ಯಾಯ ಮಾಡಿದರು. ಈ ಚುನಾವಣೆಯಲ್ಲಿ ಪ್ರಿಯಾಂಕ್ ಸೋಲುವುದು ಖಚಿತ’ ಎಂದು ಹೇಳಿದರು.
‘ಶುಕ್ರವಾರ ಮೈಸೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರುವೆ’ ಎಂದೂ ಅವರು ತಿಳಿಸಿದರು.
ಉಚ್ಚಾಟನೆ: ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆಗಿರುವ ಮಾಲೀಕಯ್ಯ ಅವರನ್ನು ಮುಂದಿನ ಆರು ವರ್ಷ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಿಳಿಸಿದ್ದಾರೆ.