ತೋವಿನಕೆರೆ: ಗ್ರಾಮದ ಹೊಸ ಬಡಾವಣೆ ಮಹಿಳೆಯರು ಸಮರ್ಪಕವಾಗಿ ನೀರು ಬಿಡುತ್ತಿಲ್ಲವೆಂದು ಗ್ರಾಮ ಪಂಚಾಯಿತಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಕೆಲವು ತಿಂಗಳಿನಿಂದ ನೀರು ಬರುತ್ತಿಲ್ಲ. ವಿಷಯವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಐವತ್ತಕ್ಕೂ ಹೆಚ್ಚು ಮಹಿಳೆಯರು ಪಂಚಾಯಿತಿ ಮುಂಭಾಗ ಕೆಲವು ಗಂಟೆಗಳ ಕಾಲ ಧರಣಿ ಕುಳಿತು ಪ್ರತಿಭಟಿಸಿದರು.
ಸ್ಥಳಕ್ಕೆ ಬಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗನರಸಯ್ಯ, ನೀರಿನ ಸಮಸ್ಯೆ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದರು.
ನಿತ್ಯ ಕನಿಷ್ಠ 25 ಬಿಂದಿಗೆಯಾದರೂ ನೀರು ಬೇಕು. 10- 15 ದಿನವಾದರೂ ಒಂದು ಹನಿ ನೀರು ಬಂದಿಲ್ಲ. ಹಣ ಕೊಟ್ಟು ಟ್ಯಾಂಕರ್ ನೀರು ಬಿಡಿಸಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಪ್ರತಿಭಟನೆ ನಿರತರನ್ನು ಸಮಾಧಾನ ಮಾಡಿದ ಪಿಡಿಒ ಎಲ್ಲರ ಜೊತೆ ಹೊಸ ಬಡಾವಣೆಗೆ ಹೋಗಿ ಸುವ್ಯವಸ್ಥಿತವಾಗಿ ನೀರು ಬಿಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಾರದಲ್ಲಿ ಸರಿಪಡಿಸುವ ಭರವಸೆ ನೀಡಿದರು.