ತುಮಕೂರು: ನಗರದ ಶಿರಾಗೇಟ್ ಬಳಿಯ ಟಾಮ್ಲಿಸನ್ ಚರ್ಚ್ ಆವರಣದಲ್ಲಿನ ಮರಗಳನ್ನು ಏಕಾಏಕಿ ತೆರವುಗೊಳಿಸಲು ಮುಂದಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕ್ರಮ ಖಂಡಿಸಿ ಚರ್ಚ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಚರ್ಚ್ನ ಆವರಣದಲ್ಲಿರುವ ಮರಗಳನ್ನು ಕಡಿದು ಜಾಗ ವಶಪಡಿಸಿಕೊಳ್ಳಲು ಮುಂದಾದ ಪ್ರಾಧಿಕಾರದ ಸಿಬ್ಬಂದಿಯ ಧೋರಣೆ ವಿರೋಧಿಸಿದರು. ಮರ ಕಡಿಯುವುದಕ್ಕೆ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ತಡೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮರ ಕಡಿಯುವ ಸಂಬಂಧ ಚರ್ಚ್ಗೆ ಯಾವುದೇ ನೋಟಿಸ್ ನೀಡಿಲ್ಲ. ಚರ್ಚ್ನ ದಾಖಲಾತಿಯನ್ನು ಪರಿಶೀಲಿಸಿಲ್ಲ. ಏಕಾಏಕಿ ಮರಗಳ ತೆರವಿಗೆ ಬಂದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚರ್ಚ್ ಆವರಣಕ್ಕೆ ಅತಿಕ್ರಮ ಪ್ರವೇಶಿಸಿ ಮರಗಳ ತೆರವಿಗೆ ಮುಂದಾದ ಪ್ರಾಧಿಕಾರದವರ ವಿರುದ್ಧ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಬೆಸ್ಕಾಂಗೆ ದೂರು ನೀಡಿರುವುದಾಗಿ ಚರ್ಚ್ ಪದಾಧಿಕಾರಿ ಜಗದೀಶ್ ಮೋಹನ್ ತಿಳಿಸಿದರು.
ಚರ್ಚ್ಗೆ ಸಂಬಂಧಿಸಿದ ಸಿಎಸ್ಐ ಸಂಸ್ಥೆ ಇದೆ. ಈ ಬಗ್ಗೆ ನಮ್ಮ ಸಂಸ್ಥೆಗೆ ದೂರು ನೀಡಿದ್ದೇವೆ. ಸಂಸ್ಥೆಯಲ್ಲಿ ಲಭ್ಯ ದಾಖಲಾತಿ ತಂದು, ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಯಾವುದೇ ಮಾಹಿತಿ ನೀಡದೆ ಏಕಾಏಕಿ ಅತಿಕ್ರಮ ಪ್ರವೇಶ ಮಾಡಿರುವುದು ಸರಿಯಲ್ಲ ಎಂದರು.
ಚರ್ಚ್ನ ಪದಾಧಿಕಾರಿಗಳಾದ ಸಂಜೀವಕುಮಾರ್, ವಿಜಯರಾಜಕುಮಾರ್, ಜಿ.ಕೆ.ವಿನೋದಕುಮಾರ್, ನರಸೀಕುಮಾರ್, ನೆಲ್ಸನ್, ಸ್ಯಾಮ್ಸನ್, ಸುನೀಲ್ ಇದ್ದರು.