ಗುಬ್ಬಿ: ತರಗತಿಗಳು ಪ್ರಾರಂಭಗೊಂಡು ತಿಂಗಳುಗಳೇ ಕಳೆದಿದ್ದರೂ ವ್ಯವಸ್ಥಿತವಾಗಿ ಬಸ್ಗಳಿಲ್ಲ ಎಂದು ಆರೋಪಿಸಿದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಮೆರವಣಿಗೆಯಲ್ಲಿ ಬಂದು, ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಸಂಚರಿಸಲು ಸರ್ಕಾರಿ ಬಸ್ಗಳ ಸೌಲಭ್ಯವಿಲ್ಲದೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಎಬಿವಿಪಿ ವಿಭಾಗೀಯ ಸಂಚಾಲಕ ಅಪ್ಪುಪಾಟೀಲ್ ಆರೋಪಿಸಿದರು.
ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಬಸ್ಗಳ ವ್ಯವಸ್ಥೆ ಮಾಡಿ, ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಗಳನ್ನು ಬಿಡುವಂತೆ ಸಾಕಷ್ಟು ಬಾರಿ ಕೇಳಿಕೊಂಡಿದ್ದರೂ, ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲ ಹಾಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ವಿದ್ಯಾರ್ಥಿಗಳು ದೂರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೆಎಸ್ಆರ್ಟಿಸಿ ಅಧಿಕಾರಿ ಪ್ರತ್ಯಕ್ಷ ರಾವ್ ಇದುವರೆಗೂ ಕೊರೊನಾ ಕಾರಣ ಬಸ್ಗಳನ್ನು ಎಲ್ಲ ಮಾರ್ಗಗಳಲ್ಲಿಯೂ ಓಡಿಸುತ್ತಿರಲಿಲ್ಲ. ಈಗ ತರಗತಿಗಳು ಪ್ರಾರಂಭವಾಗಿರುವುದರಿಂದ ಎಲ್ಲ ಮಾರ್ಗಗಳಲ್ಲಿ ಬಸ್ಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು.
ಎಬಿವಿಪಿ ರುದ್ರೇಶ್, ಶಶಿಕುಮಾರ್, ವಿದ್ಯಾರ್ಥಿ ಮುಖಂಡರಾದ ಸಿಂಧು, ರಂಜಿತಾ, ಕಾವ್ಯ, ರಕ್ಷಿತ, ಸುರೇಶ್, ಕುಮಾರ್ ಭಾಗವಹಿಸಿದ್ದರು.