ತುಮಕೂರು: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗೆ ಬದಲಾಗಿ, ಲಾಭದಾ ಯಕ ಬೆಲೆ ನೀಡಬೇಕು, ಹಾಲಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಎಪಿಎಂಸಿ ಒಳಗೆ ಹಾಗೂ ಹೊರಗೆ ನಿಗದಿಗಿಂತ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡದಂತೆ ಕಾನೂನು ರೂಪಿಸಬೇಕು ಎಂದರು.
ಕೃಷಿ ಪರಿಕರಗಳ ದರ ಹೆಚ್ಚಳ, ಮಾನವ ಸಂಪನ್ಮೂಲದ ಕೊರತೆ ಸೇರಿದಂತೆ ಹಲವಾರುನ್ಯೂನತೆಗಳಿಂದ ಕೃಷಿ ಕ್ಷೇತ್ರ ನಲುಗಿದೆ. ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೈಗಾರಿಕೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಉದ್ಯಮಿಗಳಿಗೆ ನೀಡಿರುವಂತೆ ಕೃಷಿ ಉತ್ಪನ್ನಗಳ ಬೆಲೆಯನ್ನು ರೈತರೇ ನಿಗದಿ ಮಾಡುವ ಕಾಯ್ದೆ ಜಾರಿಗೆ ಬರಬೇಕು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಯ್ಯ ಆಗ್ರಹಿಸಿದರು.
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕೆಂಬುದು ರೈತರ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ತರಬೇಕು. ಇಲ್ಲದಿದ್ದರೆ ಮತ್ತಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ. ವೈಜ್ಞಾನಿಕ ಬೆಲೆ ಸಿಗುವಂತೆ ಮಾಡಲು ಪ್ರಧಾನಿ ಕಾನೂನು ರೂಪಿಸಬೇಕು ಎಂದು ಮನವಿ ಮಾಡಿದರು.
ಇತರೆ ಸಂಘಟನೆಗಳ ರೀತಿ ಸಂಘರ್ಷದ ಹಾದಿ ತುಳಿಯದೆ, ಸೌಹಾ ರ್ದಯುತವಾಗಿ ರೈತರಿಗೆ ಲಾಭದಾಯಕ ಬೆಲೆ ಕೊಡಿಸಲು ಹೋರಾಟ ನಡೆಸ ಲಾಗುತ್ತಿದೆ ಎಂದು ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಸುರೇಶ್ ತಿಳಿಸಿದರು.
ಸಂಘದ ತುಮಕೂರು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಹಾರೋನ ಹಳ್ಳಿ, ದಕ್ಷಿಣ ಪ್ರಾಂತೀಯ ಕಾರ್ಯ ಕಾರಿ ಮಂಡಳಿ ಸದಸ್ಯ ಸತೀಶ್, ತಾಲ್ಲೂಕು ಅಧ್ಯಕ್ಷ ವಿಜಯಕುಮಾರ್ ಹೊನ್ನೇನಹಳ್ಳಿ, ಕಾರ್ಯದರ್ಶಿ ನರಸೇಗೌಡ ಭಾಗವಹಿಸಿದ್ದರು.