ಗುಬ್ಬಿ: ನಿಟ್ಟೂರಿನಿಂದ ಮೈಸೂರಿಗೆ ತೆರಳುವ ರಸ್ತೆಯು ಕೆ.ಮತ್ತಿಘಟ್ಟ- ನಿಟ್ಟೂರು ನಡುವಿನ ಎರಡು ಕಿಲೋಮೀಟರ್ ಹೊರತುಪಡಿಸಿದರೆ ಉಳಿದೆಡೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಆರೋಪಿಸಿದ ರಾಯರಪಾಳ್ಯ ಗ್ರಾಮಸ್ಥರು ರಸ್ತೆಗೆ ಬಾಳೆಗಿಡ ಹಾಗೂ ಅಡಿಕೆ ಸಸಿಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸದೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ರಸ್ತೆ ದುರಸ್ತಿ ಮಾಡಿಸದಿದ್ದರೆ ಲಾಕ್ಡೌನ್ ಬಳಿಕ ಸಂಪೂರ್ಣವಾಗಿ ವಾಹನ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಅನೇಕ ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅನುದಾನವಿಲ್ಲ ಎನ್ನುತ್ತಾರೆ. ಜನಪ್ರತಿನಿಧಿಗಳು ಕೇವಲ ಭರವಸೆಯ ಮಾತುಗಳನ್ನಾಡುತ್ತಾರೆ. ಗ್ರಾಮಸ್ಥರು ಯಾರನ್ನು ಕೇಳಬೇಕು ಎಂದು ಪಾರ್ಥಸಾರಥಿ ಪ್ರಶ್ನಿಸಿದರು.