ತುಮಕೂರು: ಮುಂಬೈನ ದಾದರ್ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ರಾಜಗೃಹದಲ್ಲಿ ದಾಂಧಲೆ ನಡೆಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಿ, ದೇಶದಿಂದ ಗಡಿಪಾರು ಮಾಡುವಂತೆ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ ಯುವಸೈನ್ಯ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದ ಸಂಘಟನೆ ಕಾರ್ಯಕರ್ತರು, ‘ದೇಶದಲ್ಲಿ ಪದೇ ಪದೇ ಇಂತಹ ದಾಳಿಗಳು ನಡೆಯುತ್ತಿವೆ. ಸರ್ಕಾರ ಹಾಗೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ನಗುತ ರಂಗನಾಥ್, ‘ಈ ಘಟನೆ ಹಿಂದಿರುವ ಕುತಂತ್ರಿಗಳ ಕೈವಾಡ ಬಹಿರಂಗಪಡಿಸಬೇಕು. ಕಠಿಣ ಕ್ರಮ ಕೈಗೊಳ್ಳಬೇಕು’ ಎಂದರು.
ಕೆಲ ಮತೀಯವಾದಿಗಳು ಅಂಬೇಡ್ಕರ್ ಕುಟುಂಬದವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಲೇ ಇದ್ದಾರೆ. ಇದರಿಂದ ಅವರ ಮೌಲ್ಯವನ್ನು ನಾಶಪಡಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಯುವಸೈನ್ಯ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರಿಗೆ ಮನವಿ ಸಲ್ಲಿಸಿದರು.
ಯುವಸೈನ್ಯ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಹೆಗ್ಗೆರೆ, ಮಧುಗಿರಿ ತಾಲ್ಲೂಕು ಅಧ್ಯಕ್ಷ ಬಿ.ಎಂ.ವಿಜಯ್, ತುಮಕೂರು ಗ್ರಾಮಾಂತರ ಅಧ್ಯಕ್ಷ ಗಿರೀಶ್, ರವೀಶ್ ಸಿದ್ಧಾರ್ಥ, ಸಾಮಾಜಿಕ ಜಾಲತಾಣದ ಉಸ್ತುವಾರಿ ವೈ.ಎ.ನಾಗರಾಜ್, ರಜನೀಕಾಂತ್, ರಾಜೇಶ್, ಮಹೇಶ್, ಶ್ರೀನಿವಾಸ್ ಇದ್ದರು.