ತುಮಕೂರು: ತಾಲ್ಲೂಕಿನ ಗೂಳೂರು ಪ್ರೌಢಶಾಲೆ ಆವರಣದಲ್ಲಿ ಕೊರೊನಾ ವಿಚಾರವಾಗಿ ಶ್ರಮಿಸುತ್ತಿರುವ 300 ಆಶಾ ಕಾರ್ಯಕರ್ತೆಯರಿಗೆ ಅರಿಸಿನ, ಕುಂಕುಮ, ಬಳೆ, ಸೀರೆ ಹಾಗೂ ಆಹಾರಧಾನ್ಯಗಳ ಕಿಟ್ಗಳನ್ನುಶಾಸಕ ಡಿ.ಸಿ.ಗೌರಿಶಂಕರ್ ವಿತರಿಸಿದರು.
ಈ ವೇಳೆ ಶಾಸಕ ಮಾತನಾಡಿ, ‘60 ಸಾವಿರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್, ತರಕಾರಿ, ಹಣ್ಣುಗಳನ್ನು ವಿತರಿಸಲಾಗಿದೆ. ಲಾಕ್ಡೌನ್ ಮುಗಿದರೂ ನಿಮ್ಮ ಸೇವೆಗೆ ಸಿದ್ಧನಿದ್ದೇನೆ’ ಎಂದರು.
ತಾಲ್ಲೂಕಿನಲ್ಲಿ ಕೊರೊನಾ ತಡೆ ವಿಚಾರವಾಗಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಕಾರ್ಯಕರ್ತೆಯರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
‘ಕ್ಷೇತ್ರದಲ್ಲಿ ಯಾರಿಗಾದರೂ ಔಷಧಿ ಖರೀದಿಸಲು ಸಾಧ್ಯವಾಗದಿದ್ದರೆ ಅಂತಹವರು ನಮಗೆ ಮಾಹಿತಿ ನೀಡಿ. ವೈದ್ಯರು ಕೊಟ್ಟಿರುವ ಚೀಟಿ ನೀಡಿದರೆ ಅವರು ಇದ್ದಲ್ಲಿಗೆ ಔಷಧಿ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
‘ತಾಲ್ಲೂಕಿನಲ್ಲಿ ಈಗಾಗಲೇ 2 ಲಕ್ಷ ಮಾಸ್ಕ್ ವಿತರಿಸಲಾಗಿದೆ. ಇನ್ನೂ ಒಂದು ಲಕ್ಷ ಮಾಸ್ಕ್ ವಿತರಿಸಲು ಸಿದ್ಧನಿದ್ದೇನೆ. ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೂ ತಲುಪಿಸುವ ಕಾರ್ಯ ಮಾಡುತ್ತೇನೆ’ ಎಂದರು.