ತುಮಕೂರು: ದೇಶದಲ್ಲಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕ್ವಿಟ್ ಇಂಡಿಯಾ ಚಳವಳಿಯ ರೀತಿಯಲ್ಲಿಯೇ ಅಧಿಕಾರ ಬಿಟ್ಟು ತೊಲಗಿ ಚಳವಳಿಯನ್ನು ಜನರು ಆರಂಭಿಸಬೇಕಾದ ಅನಿವಾರ್ಯ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿಯ 77ನೇ ವರ್ಷದ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಂದಿನ ಕಾಂಗ್ರೆಸ್ ಪಕ್ಷದ ನೇತಾರರು ಸೇರಿದಂತೆ ಹಲವರ ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆಸ್ವಾತಂತ್ರ್ಯ ದೊರೆಯಿತು. ಆದರೆ, ಕಳೆದ ಆರು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಿಂದ ಸಾರ್ವಜನಿಕ ಸಂಸ್ಥೆಗಳು ಹಾಳಾಗಿವೆ’ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇವಣ್ಣ ಸಿದ್ದಯ್ಯ ಮಾತನಾಡಿ, ‘ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದ ಜನ ಇಂದು ಅದರ ಲಾಭ ಪಡೆಯುತ್ತಿರುವುದು ದೇಶದ ದುರಂತ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರೂ ಎಂಬಂತೆ ಈಗಲಾದರೂ ಜನರು ಎಚ್ಚೆತ್ತು ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸಲು ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಚಮಾರಯ್ಯ, ಮಾಜಿ ಶಾಸಕ ಆರ್.ನಾರಾಯಣ್, ಟೂಡಾ ಮಾಜಿ ಅಧ್ಯಕ್ಷ ಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೊ ರಾಜು, ಮೆಹಬೂಬ್ ಪಾಷ, ಮುಖಂಡರಾದ ಮಂಜುನಾಥ್, ಗೀತಮ್ಮ, ಪುಟ್ಟರಾಜು, ನಟರಾಜು ಇದ್ದರು.
ದೇಶದ ಅಭಿವೃದ್ಧಿ ಮಣ್ಣುಪಾಲು
ಬಿಜೆಪಿಯು ದೇಶದ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಮೂಲಕ ಕಾಂಗ್ರೆಸ್ ಪಕ್ಷ 70 ವರ್ಷಗಳಲ್ಲಿ ಮಾಡಿದ್ದ ಅಭಿವೃದ್ಧಿಯನ್ನು ಮಣ್ಣುಪಾಲು ಮಾಡಿದೆ. ನರೇಂದ್ರ ಮೋದಿ ಸರ್ಕಾರ ದೇಶವನ್ನು ಅಧೋಗತಿಗೆ ತಳ್ಳಿದೆ ಎಂದು ಆರ್.ರಾಮಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.